ಬೆಂಗಳೂರು: ಪೊಲೀಸ್ ಠಾಣೆ ಮುಂದೆಯೇ ಮೃತ ಬಿಜೆಪಿ ಮುಖಂಡನ ಆಪ್ತೆ ಆತ್ಮಹತ್ಯೆಗೆ ಯತ್ನ
ಮೃತ ಬಿಜೆಪಿ ಮುಖಂಡ ಅನಂತರಾಜು
ಬೆಂಗಳೂರು, ಜೂ.1: ಮೃತ ಬಿಜೆಪಿ ನಾಯಕ ಅನಂತರಾಜು ಆಪ್ತೆ ಎನ್ನಲಾದ ಮಹಿಳೆ ಬಸ್ಗೆ ಸಿಲುಕಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ಮುಂಭಾಗವೇ ನಡೆದಿದೆ.
ಮೃತ ಅನಂತರಾಜ್ ಜೊತೆ ಕಳೆದ ಆರು ವರ್ಷಗಳಿಂದ ದೈಹಿಕ ಸಂಪರ್ಕ ಹೊಂದಿದ್ದಳು ಎನ್ನಲಾಗಿದ್ದು, ಆತನ ಪತ್ನಿ ಸುಮಾ ತಮಗೆ ಜೀವ ಬೆದರಿಕೆವೊಡ್ಡಿದ್ದಾರೆ ಎಂದು ಆರೋಪಿಸಿ ಈ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು.
ಆದರೆ ದೂರು ನೀಡಲು ಬಂದಾಗ ವಿಚಾರಣೆ ಮಾಡಲು ಪೊಲೀಸರು ತಮ್ಮನ್ನು ಕೂರಿಸಿಕೊಂಡಿದ್ದಾರೆ. ಹೀಗಾಗಿ ಪ್ರಕರಣದಲ್ಲಿ ನ್ಯಾಯ ಸಿಗುವುದಿಲ್ಲ ಎಂದು ಠಾಣಾ ಮುಂಭಾಗವೇ ವಾಹನವೊಂದಕ್ಕೆ ಸಿಲುಕಿ ಸಾಯಲು ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಏನಿದು ಪ್ರಕರಣ?: ಮೇ 12 ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಅನಂತರಾಜು ಸಾವನ್ನಪ್ಪಿದ್ದರು. ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರಿಗೆ ಅನಂತರಾಜು ಪತ್ನಿಯು ತನ್ನ ಗಂಡನ ಪ್ರೇಯಸಿ ಹಾಗೂ ಆಕೆಯ ಸಹಚರರು ಹನಿಟ್ರ್ಯಾಪ್ ಒತ್ತಡದಿಂದಾಗಿಯೇ ಅನಂತರಾಜು ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದರು.
ಆದರೆ, ತನಿಖೆ ವೇಳೆ ಆ ಮಹಿಳೆ ಮತ್ತು ಸುಮಾ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಕರೆಗಳ ಸಂಭಾಷಣೆ ಪ್ರಕರಣಕ್ಕೆ ಹೊಸ ಸ್ವರೂಪ ಪಡೆದುಕೊಂಡಿತ್ತು.