ಪ್ರಧಾನಿ ಸಂಚರಿಸುವ ಮಾರ್ಗದಲ್ಲಿನ ಕಾಲೇಜುಗಳಿಗೆ ರಜೆ ಏಕೆ: ಡಿ.ಕೆ ಶಿವಕುಮಾರ್ ಪ್ರಶ್ನೆ
ಬೆಂಗಳೂರು, ಜೂ. 19: ‘ಬಿಜೆಪಿಯವರಿಗೆ ಎಷ್ಟು ಭಯವಿದೇ ಎಂದರೆ ಪ್ರಧಾನಿ ಮೋದಿ ಪ್ರಯಾಣ ಮಾಡುವ ದಾರಿಯಲ್ಲಿನ ಕಾಲೇಜುಗಳಿಗೆ ರಜೆ ಏಕೆ ಕೊಡಬೇಕು? ನಮ್ಮ ವಿದ್ಯಾರ್ಥಿಗಳು ಭಯೋತ್ಪಾದಕರೇ? ವಿದ್ಯಾರ್ಥಿಗಳೇನು ಗಲಾಟೆ ಮಾಡುತ್ತಾರೆಯೇ?' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದಿಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಲ್ಲಿ ಆ ಸಂಸ್ಕೃತಿ ಇಲ್ಲ. ಪ್ರಧಾನಿಗಳು ಬರುತ್ತಾರೆ, ಹೋಗುತ್ತಾರೆ. ಅವರಿಗೆ ಅಗತ್ಯವಿರುವ ಭದ್ರತೆ ನೀಡಿ. ಹುಡುಗರು ಅವರು ಹೋಗುವ ದಾರಿಯಲ್ಲಿ ಕೈ ಬೀಸಬೇಕಾ? ರೋಡ್ ಶೋ ಮಾಡಿಸಬೇಕಾ? ಇನ್ನು ಸಚಿವರೊಬ್ಬರು ‘ಅಗ್ನಿಪಥ್'ಯೋಜನೆ ಕುರಿತು, ಸೆಕ್ಯೂರಿಟಿ ಗಾರ್ಡ್, ಫೈರ್ ಫೋರ್ಸ್ ಎಂದು ಹೇಳುತ್ತಿದ್ದಾರೆ' ಎಂದು ವಾಗ್ದಾಳಿ ನಡೆಸಿದರು.
‘ನಮ್ಮ ಹುಡುಗರು ವಿದ್ಯಾಭ್ಯಾಸ ಮಾಡುವುದು ಬೇಡವೇ? ಪದವಿ ಶಿಕ್ಷಣ ಪಡೆಯುವುದು ಬೇಡವೇ? ಉಚಿತ ಶಿಕ್ಷಣ ನೀಡಬೇಕೆಂದು ಹೋರಾಟ ಮಾಡುತ್ತಿದ್ದು, ಇವರು 17 ವರ್ಷಕ್ಕೆ ಯುವಕರನ್ನು ಸೇನೆಗೆ ಆಯ್ಕೆ ಮಾಡಿ 4 ವರ್ಷಗಳ ನಂತರ ಗಾರ್ಡ್ ಕೆಲಸಕ್ಕೆ ಹಾಕುತ್ತಾರಂತೆ. ಇಷ್ಟು ವರ್ಷಗಳ ಕಾಲ ಯುವಕರು ತರಬೇತಿ ಪಡೆದು ಕಷ್ಟ ಕಾಲದಲ್ಲಿ ದೇಶ ರಕ್ಷಣೆ ಮಾಡಿದ್ದಾರಲ್ಲವೆ? ಅವರಿಗೆ ಅಪಮಾನ ಮಾಡಬಹುದೇ?' ಎಂದು ಟೀಕಿಸಿದರು.
‘ಅಗ್ನಿಪಥ್' ಯೋಜನೆ ಸಮರ್ಥಿಸಿಕೊಳ್ಳುತ್ತಿರುವ ಮಂತ್ರಿಗಳು ತಮ್ಮ ಮಕ್ಕಳನ್ನು ಇದಕ್ಕೆ ಸೇರಿಸುತ್ತಾರೆಯೇ? ನಿಮ್ಮ ಶಾಸಕರ ಮಕ್ಕಳನ್ನು ಕಳುಹಿಸಿ. ನಿಮ್ಮ ಮಕ್ಕಳು ಮಾತ್ರ ವೈದ್ಯರು, ಎಂಜಿನಿಯರ್, ಪ್ರೊಫೆಸರ್ ಗಳಾಗ ಬೇಕು. ಬೇರೆ ಬಡವರ ಮಕ್ಕಳು ಗಾರ್ಡ್ ಕೆಲಸ ಮಾಡಬೇಕಾ? ಇದಕ್ಕೆ ನಮ್ಮ ವಿರೋಧವಿದೆ. ಯುವಕರು ನಮ್ಮ ಆಸ್ತಿ. ವಿಶ್ವದಲ್ಲೇ ಅತ್ಯಂತ ಪ್ರತಿಭಾವಂತರೇನಿಸಿದ್ದಾರೆ. ಬೇರೆ ದೇಶಗಳು ನಮ್ಮ ಯುವಕರನ್ನು ಗುರುತಿಸಿ ಕೆಲಸ ಕೊಡುತ್ತಿದ್ದಾರೆ. ನೀವು ನಮ್ಮ ಯುವಕರನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದೀರಾ?' ಎಂದು ಶಿವಕುಮಾರ್ ಟೀಕಿಸಿದರು.
‘ನಮ್ಮ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ, ಉದ್ಯೋಗ ನೀಡಿ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದಿರಿ ನೀವು ಆ ವಿಚಾರದಲ್ಲಿ ಬದ್ಧತೆ ಪ್ರದರ್ಶಿಸಿ. ಈಗ ನಮ್ಮ ದೇಶ ನೆರೆಯ ಯಾವ ದೇಶದ ಜತೆ ಉತ್ತಮ ಬಾಂಧವ್ಯ ಉಳಿಸಿಕೊಂಡಿದೆ. ನೇಪಾಳ, ಚೀನಾ, ಶ್ರೀಲಂಕಾ, ಬರ್ಮಾ ಯಾವ ದೇಶ ನಮ್ಮ ಜತೆ ಇದೆ? ವಿದೇಶಾಂಗ ನೀತಿ ಬಗ್ಗೆ ಕೊಂಚವೂ ಗಮನಹರಿಸದಿದ್ದರೆ, ಇದಕ್ಕೆಲ್ಲ ಯಾರು ಹೊಣೆ?' ಎಂದು ಅವರು ಆಗ್ರಹಿಸಿದರು.
‘ಪ್ರಧಾನಿ ಬರಲಿ, ಯೋಗ ಮಾಡಲಿ, ರಾಜಕೀಯವಾಗಿ ಬಳಸಿಕೊಳ್ಳಲಿ. ಆದರೆ, ಮಕ್ಕಳಿಗೆ ರಜೆ ಕೊಟ್ಟಿರುವುದು ಏಕೆ? ಅವರ ಮೇಲೆ ಅನುಮಾನ ಯಾಕೆ? ಸರಕಾರವೇ ತಾವು ತಪ್ಪು ಮಾಡಿದ್ದೇವೆ ಎಂದು ಇಂತಹ ತೀರ್ಮಾನಗಳ ಮೂಲಕ ಒಪ್ಪಿಕೊಳ್ಳುತ್ತಿದೆ. ಪ್ರಧಾನಿ ಬರುತ್ತಿದ್ದಾರೆಂದು ರಸ್ತೆ ಗುಂಡಿ ಮುಚ್ಚಿದ್ದು, ಅವರು ಜನರಿಗಾಗಿ ಕೆಲಸ ಮಾಡುತ್ತಿಲ್ಲ, ನಾಯಕರ ಅನುಕೂಲಕ್ಕೆ ಕೆಲಸ ಮಾಡುತ್ತಿದ್ದಾರೆ. ನಮ್ಮ ರಾಮಲಿಂಗಾರೆಡ್ಡಿ ಅವರು ಪ್ರಶ್ನೆ ಕೇಳಿರುವಂತೆ ಪ್ರಧಾನಿ ಮೋದಿ ಶೇ.40ರಷ್ಟು ಕಮಿಷನ್ ಸರಕಾರದ ಬಗ್ಗೆ ತಮ್ಮ ನಿಲುವು ತಿಳಿಸಲಿ. ಅವರು ಕೇಳಿರುವ ಪ್ರಶ್ನೆಗಳಿಗೆ ಪ್ರಧಾನಿ ಉತ್ತರಿಸಲಿ' ಎಂದು ಒತ್ತಾಯಿಸಿದರು.
‘ನಾನು ನನ್ನ ಕ್ಷೇತ್ರದಲ್ಲಿ 350 ರಿಂದ 400 ದೇವಾಲಯ ಜೀರ್ಣದ್ಧಾರ ಮಾಡಿಸಿದ್ದೇನೆ. ಬಿಜೆಪಿಯವರು ಬಂದು ನೋಡಲಿ. ನಾನು ಒಬ್ಬ ಹಿಂದೂ. ನಾವು ಎಲ್ಲರಿಗೂ ಗೌರವ ನೀಡುತ್ತೇವೆ. ನಾವು ಯಾರಿಗಾದರೂ ಅಧಿಕಾರ ನೀಡುತ್ತೇವೆ, ಅವರಿಗೇನು? ನಮ್ಮ ಯುವಕರ ಸಂಘಟನೆ ಬಗ್ಗೆ ಇವರಿಗೆ ಭಯ ಇದೇ ಎಂಬುದು ಸ್ಪಷ್ಟವಾಗಿದೆ'
-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ