ಚಕ್ರತೀರ್ಥ ಸಮಿತಿಗೆ ನೀಡಿರುವ ಸಂಭಾವನೆ 33,800 ರೂ.: ಪ್ರೊ.ಬರಗೂರು ರಾಮಚಂದ್ರಪ್ಪ
ಬೆಂಗಳೂರು, ಜು.6: ‘ಚಕ್ರತೀರ್ಥ ಸಮಿತಿ ಸಂಭಾವನೆ 5 ಸಾವಿರ’ ಎಂಬ ಶೀರ್ಷಿಕೆಯಡಿ ಕನ್ನಡ ದಿನಪತ್ರಿಕೆಯೊಂದು ಪ್ರಕಟಿಸಿರುವ ವರದಿ ಕುರಿತು ಸ್ಪಷ್ಟಣೆ ನೀಡಿರುವ ಪ್ರೊ.ಬರಗೂರು ರಾಮಚಂದ್ರಪ್ಪ, ಚಕ್ರತೀರ್ಥ ಸಮಿತಿಗೆ ನೀಡಿರುವ ಸಂಭಾವನೆ 5,000 ರೂಪಾಯಿಯಲ್ಲ, 33,800 ರೂಪಾಯಿ ಎಂಬುದು ಸತ್ಯ ಸಂಗತಿ ಎಂದು ತಿಳಿಸಿದ್ದಾರೆ.
ಪಠ್ಯಪುಸ್ತಕಗಳ ರಚನೆ ಮತ್ತು ಪರಿಷ್ಕರಣೆಗಾಗಿ ಚಕ್ರತೀರ್ಥ ಸಮಿತಿ ರಚನೆಯಾಗಿದೆ ಎಂದು ವರದಿ ಹೇಳುತ್ತದೆ. ವಾಸ್ತವವಾಗಿ ಚಕ್ರತೀರ್ಥ ಸಮಿತಿ ರಚನೆಯಾಗಿದ್ದು ಪಠ್ಯಪುಸ್ತಕಗಳ ರಚನೆ ಹಾಗೂ ಪರಿಷ್ಕರಣೆಗಾಗಿ ಅಲ್ಲ. ಸಂಕೀರ್ಣ ವಿಷಯಗಳ ಪರಿಶೀಲನೆ ಮಾಡಿ ಒಂದು ತಿಂಗಳಲ್ಲಿ ವರದಿಯನ್ನು ಕೊಡಲು ಎಂದು ಅವರು ತಿಳಿಸಿದ್ದಾರೆ.
ಚಕ್ರತೀರ್ಥ ಸಮಿತಿಗೆ ಕೇವಲ ಐದು ಸಾವಿರ ರೂಪಾಯಿಗಳ ಸಂಭಾವನೆಯನ್ನು ಕೊಡಲಾಗಿದೆ ಎಂದು ದೊಡ್ಡ ಶೀರ್ಷಿಕೆಯನ್ನು ವರದಿಗೆ ನೀಡಲಾಗಿದೆ. ಆದರೆ ಅದೇ ವರದಿಯಲ್ಲಿ ಸಂಭಾವನೆ 33,800 ರೂಪಾಯಿ ಎಂದಿದೆ. 28,000 ಬಾಕಿ ಉಳಿದಿದೆ ಎಂದು ಬರೆಯಲಾಗಿದೆ. ಬಾಕಿ ಉಳಿಸಿಕೊಂಡು ಆನಂತರ ಹಣ ಜಮಾ ಮಾಡುವ ಪದ್ಧತಿಯು ನಮ್ಮ ಸರಕಾರದಲ್ಲಿ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದು ಅವರು ತಿಳಿಸಿದ್ದಾರೆ.
ನಮ್ಮ ಸಮಿತಿಯಲ್ಲೂ ಅನೇಕರಿಗೆ ಬಾಕಿ ಉಳಿಸಿಕೊಂಡು ಆನಂತರದಲ್ಲಿ ಹಣ ನೀಡಲಾಯಿತು. ಹೀಗಾಗಿ ಚಕ್ರತೀರ್ಥ ಸಮಿತಿಗೆ ನೀಡಿರುವ ಸಂಭಾವನೆ 5,000 ರೂಪಾಯಿಯಲ್ಲ, 33,800 ರೂಪಾಯಿ ಎಂಬುದು ಸತ್ಯ ಸಂಗತಿ ಎಂದು ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
ಮುಡಂಬಡಿತ್ತಾಯ ಸಮಿತಿಯು 3 ಕೋಟಿ 63 ಲಕ್ಷ ಖರ್ಚು ಮಾಡಿದೆ ಎಂದೂ, ನಮ್ಮ ಸಮಿತಿ 2 ಕೋಟಿ 59 ಲಕ್ಷ ಖರ್ಚು ಮಾಡಿದೆ ಎಂದೂ, ಚಕ್ರತೀರ್ಥ ಸಮಿತಿ 49 ಲಕ್ಷ 99 ಸಾವಿರ ರೂ. ಖರ್ಚು ಮಾಡಿದೆ ಎಂದೂ ವರದಿ ಹೇಳುತ್ತದೆ. ಇದು ನಿಜವೇ ಇರಬಹುದು. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಮೇಲ್ನೋಟಕ್ಕೆ ನಮ್ಮ ಸಮಿತಿ ತುಂಬಾ ಖರ್ಚು ಮಾಡಿದೆ ಎಂದೂ ಚಕ್ರತೀರ್ಥ ಸಮಿತಿಯು ಕಡಿಮೆ ಖರ್ಚು ಮಾಡಿದೆ ಎಂದೂ ತೋರಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಅರ್ಥ ಮಾಡಿಕೊಳ್ಳಬೇಕಾದ ಸಂಗತಿ ಏನೆಂದರೆ- ನಮ್ಮ ಸಮಿತಿ ಎರಡೂವರೆ ವರ್ಷಗಳ ಕಾಲ ಕೆಲಸ ಮಾಡಿದೆ. ವಾಸ್ತವವಾಗಿ ಮೊದಲು 27 ಸಮಿತಿಗಳನ್ನು ರಚನೆ ಮಾಡಲಾಯಿತು. ಆ ನಂತರ ನನ್ನನ್ನು ಸರ್ವಾಧ್ಯಕ್ಷನನ್ನಾಗಿ ಆಯ್ಕೆ ಮಾಡಲಾಯಿತು. ಆ ಸಮಿತಿಗಳು ಎರಡೂವರೆ ವರ್ಷ ಕೆಲಸ ಮಾಡಿದವು. ನಾನು ಎರಡು ವರ್ಷ ಕೆಲಸ ಮಾಡಿದೆ. ಒಟ್ಟು ಸಮಿತಿಯಲ್ಲಿ 172 ಜನರಿದ್ದರು ಎಂದು ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
ಅಧಿಕಾರಿಗಳನ್ನೂ ಒಳಗೊಂಡು ಚಕ್ರತೀರ್ಥ ಸಮಿತಿಯಲ್ಲಿದ್ದದ್ದು(ಸರಕಾರದ ಆದೇಶದ ಪ್ರಕಾರ) ಕೇವಲ 16 ಜನ. ಇವರು ಕೆಲಸ ಮಾಡಿದ್ದು ಹೆಚ್ಚೆಂದರೆ ಎರಡು ಅಥವಾ ಮೂರು ತಿಂಗಳು ಮಾತ್ರ. ಇಲ್ಲಿ ವ್ಯತ್ಯಾಸ ಬಹಳ ಸ್ಪಷ್ಟವಾಗಿದೆ. ನಾನು ಸರ್ವಾಧ್ಯಕ್ಷನಾಗಿದ್ದಾಗ 27 ಸಮಿತಿಗಳು, 172 ಜನರು ಕೆಲಸ ಮಾಡಿದ್ದಾರೆ. ಅದರ ಜೊತೆಗೆ ಹೊರಗಿನ 30ಕ್ಕೂ ಹೆಚ್ಚು ತಜ್ಞರ ಜೊತೆಯಲ್ಲಿ, ಅಧ್ಯಾಪಕರ ಜೊತೆಯಲ್ಲಿ ಸಭೆ ಮಾಡಿದ್ದೇವೆ. ಒಟ್ಟಾರೆ ಹೇಳುವುದಾದರೆ ನೂರಾರು ಕಾರ್ಯಾಗಾರಗಳು ನಡೆದಿವೆ ಎಂದು ಅವರು ತಿಳಿಸಿದ್ದಾರೆ.
ಇವರಿಗೆ ಪ್ರಯಾಣ ಭತ್ತೆ, ಸಭಾ ಭತ್ತೆ ಇತ್ಯಾದಿಗಳನ್ನು ಭರಿಸಿದ್ದು ಪಠ್ಯಪುಸ್ತಕ ಸಂಘ. ಅದೆಲ್ಲವೂ ಈ ರಚನಾ ಪ್ರಕ್ರಿಯೆಯಲ್ಲಿ ಸೇರಿವೆ. ಇಷ್ಟು ಕಾಲ, ಇಷ್ಟು ಮಂದಿ ಮಾಡಿದ ರಚನೆಯ ಕುರಿತು ಆ ವರದಿಯಲ್ಲಿ ಉಲ್ಲೇಖ ಇಲ್ಲದೆ ಇರುವುದರಿಂದ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡುತ್ತದೆ. ಕಾಲಾವಧಿಯ ವ್ಯತ್ಯಾಸ, ಕೆಲಸದ ರೀತಿಯ ವ್ಯತ್ಯಾಸ, ಸದಸ್ಯರ ಸಂಖ್ಯೆಯವ್ಯತ್ಯಾಸ ಈ ವಿವರಗಳೆಲ್ಲ ವರದಿಯಲ್ಲಿ ಇದ್ದಿದ್ದರೆ ಓದುಗರಿಗೆ ಸ್ಪಷ್ಟವಾಗುತ್ತಿತ್ತು ಎಂದು ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆಯ ಪ್ರಕ್ರಿಯೆಯಲ್ಲಿ ಡಿಟಿಪಿ ಮಾಡಿರುವ ಖರ್ಚುಗಳೂ ಸೇರಿರುತ್ತವೆ. ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ ಮೇಲೆ ನಿಯಮಗಳ ಪ್ರಕಾರ ಸರಕಾರ ಕೊಡುವ ಭತ್ತೆಗಳ ಜೊತೆಗೆ ಡಿಟಿಪಿ ಇತ್ಯಾದಿಗಳೆಲ್ಲವೂ ಸೇರಿರುತ್ತವೆ. ಸಮಿತಿಯ ಸದಸ್ಯರಿಗಾಗಲಿ, ಅಧ್ಯಕ್ಷರಿಗಾಗಲಿ ಹಣ ಕೊಟ್ಟು ಹಂಚಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಪಠ್ಯ ಪುಸ್ತಕ ಸಂಘ ಅಥವಾ ಇಲಾಖೆ ಆ ಹಣವನ್ನು ಹಂಚುತ್ತದೆ. ಇಡೀ ಹಣಕಾಸಿನ ವ್ಯವಹಾರವನ್ನು ನೋಡಿಕೊಳ್ಳುವುದು ನಿಯಮಾನುಸಾರ ಪಠ್ಯಪುಸ್ತಕ ಸಂಘವೇ ಹೊರತು ನಮ್ಮ ಸಮಿತಿಗಳೂ ಅಲ್ಲ, ಸದಸ್ಯರೂ ಅಲ್ಲ, ಅಧ್ಯಕ್ಷರೂ ಅಲ್ಲ. ಈ ವ್ಯತ್ಯಾಸವನ್ನು ಸಾರ್ವಜನಿಕರು ಗಮನಿಸಬೇಕು ಎಂದು ಬರಗೂರು ರಾಮಚಂದ್ರಪ್ಪ ಪ್ರಕಟಣೆಯಲ್ಲಿ ಕೋರಿದ್ದಾರೆ.