ಬೆಂಗಳೂರು | ವಿದೇಶಿ ಪ್ರಜೆಗಳಿಗೆ ವಂಚನೆ: 11 ಮಂದಿ ಆರೋಪಿಗಳ ಬಂಧನ, ನಕಲಿ ಕಾಲ್ಸೆಂಟರ್ ಗೆ ಬೀಗ ಜಡಿದ ಪೊಲೀಸರು
ಬೆಂಗಳೂರು, ಜು. 8: ‘ಕಾಲ್ ಸೆಂಟರ್ ತೆರೆದು ನೆರವು ನೀಡುವ ನೆಪದಲ್ಲಿ ವಿದೇಶಿ ಪ್ರಜೆಗಳಿಗೆ ವಂಚನೆ ಮಾಡುತ್ತಿದ್ದ ಆರೋಪದ ಮೇಲೆ 11 ಮಂದಿ ಆರೋಪಿಗಳನ್ನು ಬಂಧಿಸಿದ್ದು, ನಕಲಿ ಕಾಲ್ ಸೆಂಟರ್ ಗೆ ಬೀಗ ಹಾಕುವಲ್ಲಿ ಇಲ್ಲಿನ ವೈಟ್ಫೀಲ್ಡ್ ಉಪ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ' ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ‘ಎರಡು ವರ್ಷಗಳಿಂದ ವಿದೇಶಿ ಪ್ರಜೆಗಳಿಗೆ ವಂಚಿಸಿದ್ದ ಆರೋಪದ ಮೇಲೆ ಗುಜರಾತ್ ಮೂಲದ ರಿಷಿವ್ಯಾಸ್ ಪ್ರತೀಕ್, ಪರೀಶ್, ಪಟೇಲ್, ಕಿರಣ್ ಹಾಗೂ ಸೈಯ್ಯದ್ ಸೇರಿದಂತೆ 11 ಮಂದಿಯನ್ನು ಪೆÇಲೀಸರು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ' ಎಂದು ವಿವರಿಸಿದರು.
‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 2 ಕೋಟಿ ರೂ. ಬೆಲೆಬಾಳುವ 127 ಕಂಪ್ಯೂಟರ್ಗಳು, 4 ಲ್ಯಾಪ್ಟಾಪ್, 150 ಹೆಡ್ಫೆÇೀನ್, 10 ಇಂಟರ್ನಲ್ ಹಾರ್ಡ್ಡಿಸ್ಕ್, ಆಪೆಲ್ ಕಂಪೆನಿಯ 6 ಮೊಬೈಲ್ಗಳು, 3 ಕಾರು, 2 ಶಾಲಾವಾಹನ, ಟಿಟಿ ವಾಹನ ಹಾಗೂ 18 ಲಕ್ಷ ರೂ.ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ವಿವರ ನೀಡಿದರು.
‘ಇಲ್ಲಿನ ವೈಟ್ಫೀಲ್ಡ್ನ ಗಾಯತ್ರಿ ಟೆಕ್ಪಾರ್ಕ್ನಲ್ಲಿ ಆರೋಪಿಗಳು ಎಥಿಕಲ್ ಇನ್ಫೋ ಪ್ರೈ.ಲಿ ಹೆಸರಿನಲ್ಲಿ ಕಂಪೆನಿ ತೆರದಿದ್ದ ಆರೋಪಿಗಳು ನೂರಾರು ಟೆಲಿಕಾಲರ್ಗಳ ಮೂಲಕ ಅಮೆರಿಕ ಪ್ರಜೆಗಳನ್ನು ಸಂಪರ್ಕಿಸಿ ಹಣ ವರ್ಗಾವಣೆ ಬಗ್ಗೆ ಮಾಹಿತಿ ನೀಡುವ ನೆಪದಲ್ಲಿ ವಂಚಿಸುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ' ಎಂದು ಅವರು ತಿಳಿಸಿದರು.
ಮೇಲ್ಕಂಡ ಕಾಲ್ಸೆಂಟರ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬಹುತೇಕ ಸಿಬ್ಬಂದಿಗೆ ಇವರ ವಂಚನೆ ಬಗ್ಗೆ ಅರಿವಿರಲಿಲ್ಲ. ಉದ್ಯೋಗಿಗಳಿಗೆ ಕಂಪೆನಿ ವೇತನ ನೀಡುತ್ತಿತ್ತು. ಜತೆಗೆ ಇಲ್ಲಿನ ನೌಕರರನ್ನು ಶಾಲಾ ವಾಹನದಲ್ಲಿ ಡ್ರಾಪ್ ಅಂಡ್ ಪಿಕಪ್ ಮಾಡುತ್ತಿದ್ದರು. ವಿವಿಧ ದೇಶಗಳಿಂದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡುವ ಮೂಲಕ ವಂಚನೆ ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು ಹೆಚ್ಚಿನ ತನಿಖೆ ಅಗತ್ಯವಿದೆ ಎಂದು ಹೇಳಿದರು.