ದುಡ್ಡು ಮಾಡಲು ನಿಗಮ-ಮಂಡಳಿ ಅಧ್ಯಕ್ಷ ಹುದ್ದೆ ಮಾರಾಟ: ಆಪ್ ಆರೋಪ

ಜಗದೀಶ್ ವಿ ಸದಂ- ಆಪ್ ಮುಖಂಡರು
ಬೆಂಗಳೂರು, ಜು.13: ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷ ಹುದ್ದೆಗಳನ್ನು ಬಿಜೆಪಿಯು ಹಣ ಪಡೆದು ಹಂಚುತ್ತಿದ್ದು, ಈ ಮೂಲಕ ಮುಂದಿನ ಚುನಾವಣೆಯಲ್ಲಿ ಅಕ್ರಮ ಎಸಗಲು ಭಾರಿ ಹಣ ಸಂಗ್ರಹಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಬುಧವಾರ ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಎಎಪಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ರಾಜ್ಯ ಸರಕಾರವು ಸುಮಾರು 52 ನಿಗಮ, ಮಂಡಳಿಗಳ ಅಧ್ಯಕ್ಷರನ್ನು ವಜಾ ಮಾಡಿರುವುದರ ಹಿಂದೆ ಭಾರಿ ಅಕ್ರಮ ಅಡಗಿದೆ ಎಂದು ದೂರಿದರು.
ಬಿಜೆಪಿಯ 40 ಪರ್ಸೆಂಟ್ ಸರಕಾರವು ಇದರಲ್ಲೂ ದುಡ್ಡು ಹೊಡೆಯುತ್ತಿದ್ದು, ಹೆಚ್ಚು ಹಣ ನೀಡಿದವರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಗಳನ್ನು ಹಂಚಿಕೆ ಮಾಡುತ್ತಿದೆ. ಮುಂಬರುವ ಬಿಬಿಎಂಪಿ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಅಕ್ರಮ ಎಸಗಲು ಬಿಜೆಪಿಯು ಹಲವು ಮಾರ್ಗಗಳಿಂದ ಹಣ ಸಂಗ್ರಹಿಸುತ್ತಿದ್ದು, ಇದು ಕೂಡ ಆ ಯೋಜನೆಯ ಭಾಗವಾಗಿದೆ ಎಂದು ಅವರು ಆರೋಪಿಸಿದರು.
ಬಿಜೆಪಿ ಸರಕಾರವು ಬ್ರಹ್ಮಾಂಡ ಭ್ರಷ್ಟಾಚಾರ ಎಸಗುವವರನ್ನು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಗಳಲ್ಲೇ ಉಳಿಸಿಕೊಂಡಿದೆ. ರುದ್ರೇಶ್ ಅಧ್ಯಕ್ಷತೆಯ ಕೆಆರ್ಐಡಿಎಲ್ನಲ್ಲಿ ಅವ್ಯಾಹತವಾಗಿ ಅಕ್ರಮ ನಡೆಯುತ್ತಿದೆ. ಕೆಎಸ್ಸಾರ್ಟಿಸಿ ಅಧ್ಯಕ್ಷ ಚಂದ್ರಪ್ಪ ನಿಗಮವನ್ನು ಹಳ್ಳ ಹಿಡಿಸಿದ್ದಾರೆ. ಕೆಎಸ್ಸಾರ್ಟಿಸಿಯ ಬಹುತೇಕ ಬಸ್ಗಳು ಡಿಪೋದಲ್ಲೆ ನಿಂತಿರುವುದು ಇದಕ್ಕೆ ನಿದರ್ಶನ ಎಂದು ಜಗದೀಶ್ ವಿ ಸದಂ ಟೀಕಿಸಿದರು.
ಕೆಎಸ್ಟಿಡಿಸಿ ನಿರ್ವಹಣೆಯಲ್ಲಿ ಕಾಪು ಸಿದ್ದಲಿಂಗಸ್ವಾಮಿ ಸಂಪೂರ್ಣ ವಿಫಲರಾಗಿದ್ದಾರೆ. ಇವರೆಲ್ಲರನ್ನು ವಜಾ ಮಾಡದೆ ಉಳಿಸಿಕೊಂಡಿರುವುದು ಖಂಡನೀಯ ಎಂದು ಜಗದೀಶ್ ವಿ ಸದಂ ಹೇಳಿದರು.







