ಆಂಧ್ರಪ್ರದೇಶದಲ್ಲಿ ಅಪಘಾತ: ಶಿವಾಜಿನಗರ ಠಾಣೆ ಪಿಎಸ್ಸೈ, ಕಾನ್ಸ್ಟೇಬಲ್ ಸಹಿತ ಮೂವರು ಮೃತ್ಯು
ಸಾಂದರ್ಭಿಕ ಚಿತ್ರ
ಬೆಂಗಳೂರು, ಜು.24: ಆಂಧ್ರಪ್ರದೇಶದ ತಿರುಪತಿ ಮಾರ್ಗದಲ್ಲಿ ಅಪಘಾತ ಸಂಭವಿಸಿ ಬೆಂಗಳೂರಿನ ಶಿವಾಜಿನಗರ ಠಾಣೆ ಪಿಎಸ್ಸೈ, ಕಾನ್ಸ್ಟೇಬಲ್ ಹಾಗೂ ಕಾರಿನ ಚಾಲಕ ಸಾವನ್ನಪ್ಪಿದ್ದಾರೆ.
ಶಿವಾಜಿನಗರದ ಪೊಲೀಸ್ ಠಾಣೆಯ ಪಿಎಸ್ಸೈ ಬಸವ ಕಲ್ಯಾಣದ ಅವಿನಾಶ್(29), ಕಾನ್ಸ್ಟೇಬಲ್ ಅನಿಲ್ ಮುಲಿಕ್ ಮತ್ತು ಕಾರು ಚಾಲಕ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಪ್ರೊಬೆಷನರಿ ಪಿಎಸ್ಸೈ ದೀಕ್ಷಿತ್, ಕಾನ್ಸ್ಟೇಬಲ್ ಶರಣಬಸವ ಎಂಬವರಿಗೆ ಗಾಯವಾಗಿದೆ. ಅವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನಿಂದ ಶನಿವಾರ ಹೊರಟಿದ್ದ ತಂಡ, ರವಿವಾರ ಬೆಳಗ್ಗೆ ಚಿತ್ತೂರಿನಿಂದ ತಿರುಪತಿಯತ್ತ ತೆರಳುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಕಾರು, ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಉರುಳಿ ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ.
ಗಾಂಜಾ ಮಾರಾಟ ಹಾಗೂ ಸಾಗಣೆ ಆರೋಪಿಗಳ ಬಂಧನಕ್ಕಾಗಿ ಶಿವಾಜಿನಗರ ಪೊಲೀಸರ ತಂಡ ಇನ್ನೋವಾ ಕಾರಿನಲ್ಲಿ ಆಂಧ್ರಪ್ರದೇಶಕ್ಕೆ ತೆರಳಿತ್ತು ಎನ್ನುವ ಮಾಹಿತಿ ಗೊತ್ತಾಗಿದೆ.