ಹೈಕೋರ್ಟ್ ಆದೇಶವಿದ್ದರೂ ಮರಗಣತಿ ಸಮೀಕ್ಷೆ ಆರಂಭಿಸದ ಬಿಬಿಎಂಪಿ
ಬೆಂಗಳೂರು, ಆ.1: ನಗರ ವ್ಯಾಪ್ತಿಯಲ್ಲಿನ ಮರಗಳ ಸಮಗ್ರ ಗಣತಿ ಮಾಡುವಂತೆ ಹೈಕೋರ್ಟ್ ಮೂರು ವರ್ಷಗಳ ಹಿಂದೆಯೇ ಆದೇಶ ನೀಡಿದ್ದರೂ ಬಿಬಿಎಂಪಿ ಈವರೆಗೆ ಸಮೀಕ್ಷೆಯನ್ನೇ ಆರಂಭಿಸಿಲ್ಲ.
ಬೆಂಗಳೂರು ನಗರದಲ್ಲಿರುವ ಮರಗಳ ಗಣತಿ ಕೋರಿ ಪರಿಸರವಾದಿ ಟಿ.ಡಿ.ದತ್ತಾತ್ರೇಯ ಮತ್ತು ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು 2019ರ ಜೂ.24ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್ ನ್ಯಾಯಪೀಠ, ಬಿಬಿಎಂಪಿ ವ್ಯಾಪ್ತಿಯಲ್ಲಿನ ಮರಗಳ ಸಮಗ್ರ ಗಣತಿಗೆ ಆದೇಶಿಸಿತ್ತು.
ಆದರೆ, ಬಿಬಿಎಂಪಿ ಈವರೆಗೆ ಮರಗಳ ಗಣತಿಯನ್ನೇ ಆರಂಭಿಸಿಲ್ಲ. ಹೈಕೋರ್ಟ್ ಆದೇಶದಂತೆ ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರು ನಗರ ಜಿಲ್ಲಾ ಅರಣ್ಯ ವಿಭಾಗವು 8,055 ಮರಗಳನ್ನು ಸಮೀಕ್ಷೆಯಿಂದ ಗುರುತಿಸಿದೆ.
ನಗರ ವ್ಯಾಪ್ತಿಯಲ್ಲಿ ಮರಗಳ ಗಣತಿ ಮಾಡಲು ಬಿಬಿಎಂಪಿ ಅರಣ್ಯ ವಿಭಾಗದಲ್ಲಿ ಸಿಬ್ಬಂದಿಗಳ ಕೊರತೆಯಿದೆ. ಈ ಹಿನ್ನೆಲೆಯಲ್ಲಿ ನಗರದ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ(ಐಡಬ್ಲ್ಯೂಎಸ್ಟಿ)ಗೆ ಮರಗಳನ್ನು ಗಣತಿಗೆ 2 ಕೋಟಿ ರೂ.ಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ, ವಿವಿಧ ಕಾರಣಗಳನ್ನು ನೀಡಿ ಐಡಬ್ಲ್ಯೂಎಸ್ಟಿ ಸಂಸ್ಥೆ ಮರಗಣತಿ ಮಾಡದೆ ಹಣವನ್ನು ಮರಳಿಸಿತ್ತು. ನಂತರ, ಎರಡು ವರ್ಷಗಳ ಹಿಂದೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ)ದೊಂದಿಗೆ ಮರಗಳ ಗಣತಿ ಮಾಡಿಕೊಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪ್ರಸ್ತಾವನೆಯನ್ನು ಒಪ್ಪಿದ ಜಿಕೆವಿಕೆ 4.5 ಕೋಟಿ ರೂ.ಒಪ್ಪಂದಕ್ಕೆ ಮುಂದಾಗಿತ್ತು. ಆದರೆ, ವಿವಿಧ ಕಾರಣಗಳಿಂದ ಒಪ್ಪಂದ ಪೂರ್ಣಗೊಳ್ಳದೆ ನನೆಗುದಿಗೆ ಬಿದ್ದಿದೆ.