ಬೆಂಗಳೂರು: ಪುತ್ರಿಯನ್ನು ಹತ್ಯೆಗೈದು, ಆತ್ಮಹತ್ಯೆಗೆ ಯತ್ನಿಸಿದ ತಾಯಿಯ ಬಂಧನ
ಬೆಂಗಳೂರು, ಆ.5:ನಾಲ್ಕು ವರ್ಷದ ಪುತ್ರಿಯನ್ನು ಕಟ್ಟಡದ ಮೇಲಿಂದ ಎಸೆದು ಹತ್ಯೆಗೈದ ನಂತರ, ಆತ್ಮಹತ್ಯೆಗೆ ಯತ್ನಿಸಿದ ಆರೋಪದಡಿ ತಾಯಿಯನ್ನು ಇಲ್ಲಿನ ಸಂಪಗಿರಾಮನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಸುಷ್ಮಾ ಭಾರದ್ವಾಜ್ ಬಂಧಿತ ತಾಯಿಯಾಗಿದ್ದು, ಈಕೆ ದಂತ ವೈದ್ಯೆ ಎಂದು ಪೊಲೀಸರು ಗುರುತಿಸಿದ್ದಾರೆ.
ಇಲ್ಲಿನ ಎಸ್ಆರ್ನಗರದ ಅಪಾರ್ಟ್ಮೆಂಟ್ನಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಆಕೆಯ ಪತಿ ಕಿರಣ್ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಸುಷ್ಮಾ ಭಾರದ್ವಾಜ್ ಅವರನ್ನು ಬಂಧಿಸಲಾಗಿದೆ. ಇನ್ನೂ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಆರೋಪಿಯು ತನ್ನ ಮಗಳೊಂದಿಗೆ ಬಾಲ್ಕನಿಗೆ ಬಂದು ನಂತರ ಅವಳನ್ನು ಕೆಳಗೆ ಎಸೆದಿರುವ ದೃಶ್ಯ ಸೆರೆಯಾಗಿದೆ.
ಅಷ್ಟೇ ಅಲ್ಲದೆ, ನಂತರ ಸುಷ್ಮಾ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನದಲ್ಲಿ ರೇಲಿಂಗ್ ಮೇಲೆ ಏರುತ್ತಾಳೆ. ಆದರೆ ನೆರೆಹೊರೆಯವರು ರಕ್ಷಿಸಿದ್ದಾರೆ. ಸುಷ್ಮಾ ತನ್ನ ವೃತ್ತಿ ಬೆಳವಣಿಗೆಗೆ ನಾಲ್ಕು ವರ್ಷದ ಮಗು ಅಡ್ಡಿಯಾಗಿದ್ದಾಳೆ ಎಂದು ಭಾವಿಸಿ ಖಿನ್ನತೆಗೆ ಒಳಗಾಗಿದ್ದಳು ಎಂದು ತಿಳಿದುಬಂದಿದೆ.
ಇತ್ತೀಚಿಗಷ್ಟೇ ಮಗಳನ್ನು ರೈಲ್ವೆ ನಿಲ್ದಾಣದಲ್ಲಿ ಬಿಟ್ಟು ಹೋಗಲು ಯತ್ನಿಸಿದ್ದಳು. ಈ ವಿಷಯ ತಿಳಿದ ಕಿರಣ್ ತಕ್ಷಣ ಠಾಣೆಗೆ ಧಾವಿಸಿ ನೋಡಿದಾಗ ಅವರ ಮಗಳು ಪತ್ತೆಯಾಗಿದ್ದಳು ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ಮಾಹಿತಿ ನೀಡಿದ್ದಾರೆ.