ಸಚಿವ ಪ್ರಭು ಚವ್ಹಾಣ್ ಹೆಸರಿನಲ್ಲಿ ನಕಲಿ ಸಹಿ ಮಾಡಿ ನೇಮಕಾತಿ ಆದೇಶ: ಆರೋಪಿಯ ಬಂಧನ
( ಜ್ಞಾನೇಂದ್ರ ಜಾಧವ್ -ಬಂಧಿತ ಆರೋಪಿ )
ಬೆಂಗಳೂರು, ಆ.5: ಪಶು ಸಂಗೋಪನೆ ಇಲಾಖೆಯಲ್ಲಿ ವಿವಿಧ ವೃಂದದಲ್ಲಿ ಖಾಲಿಯಿರುವ ಕೆಲಸ ಕೊಡಿಸುವುದಾಗಿ ನಂಬಿಸಿ ಸಚಿವ ಪ್ರಭು ಚವ್ಹಾಣ್ ಹೆಸರಿನಲ್ಲಿ ನಕಲಿ ಸಹಿ ಹಾಗೂ ಸೀಲು ಬಳಸಿ ವಂಚನೆ ಗೈದಿರುವ ಆರೋಪ ಪ್ರಕರಣ ಸಂಬಂಧ ಓರ್ವನನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ಮೂಲದ ಜ್ಞಾನೇಂದ್ರ ಜಾಧವ್ ಬಂಧಿತ ಆರೋಪಿ ಎಂದು ಪೊಲೀಸರು ಗುರುತಿಸಿದ್ದಾರೆ.
ಆರೋಪಿ ಒಂದು ವರ್ಷ ಇಲಾಖೆಯ ಸಚಿವರ ಬಳಿ ಕೆಲಸ ಮಾಡಿದ್ದ. ಅನ್ಯ ಕಾರಣಕ್ಕಾಗಿ ಕೆಲಸ ತೊರೆದಿದ್ದ. ಬಳಿಕ ಊರು ಸೇರಿದ್ದ ಆರೋಪಿ ಪಶುಸಂಗೋಪನೆ ಇಲಾಖೆಯಲ್ಲಿ ಎಫ್ಡಿಎ, ಎಸ್ಡಿಎ ಹಾಗೂ ಡಿ ದರ್ಜೆ ಕೆಲಸ ಖಾಲಿಯಿದ್ದು, ಕೆಲಸ ಕೊಡಿಸುವುದಾಗಿ ನಂಬಿಸಿ ಸುಮಾರು 12 ಜನರಿಂದ 24 ಲಕ್ಷದವರೆಗೆ ಹಣ ಪಡೆದಿದ್ದಾನೆ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.
ಅಷ್ಟೇ ಅಲ್ಲದೆ, ವಿಶೇಷ ನೇರ ನೇಮಕಾತಿಯಲ್ಲಿ 63 ಮಂದಿ ನೇಮಕವಾಗಿದ್ದಾರೆ ಎಂದು ತಿಳಿಸಿ ಆಕ್ಷೇಪಣೆ ಸಲ್ಲಿಕೆಗೆ ತಮ್ಮ ಇಮೇಲ್ ನೀಡಿದ್ದ.ಜತೆಗೆ, ಸಚಿವರ ಹೆಸರಿನಲ್ಲಿ ನಕಲಿ ಸಹಿ, ಸೀಲು ಬಳಸಿ ವಿಧಾನಸೌಧದಲ್ಲಿರುವ ಮುಖ್ಯಮಂತ್ರಿ ಕಚೇರಿಗೂ ನೇಮಕಾತಿ ಅಧಿಸೂಚನೆಯ ನಕಲಿ ಪ್ರತಿ ಕಳುಹಿಸಿ ಹಣ ಕೊಟ್ಟವರನ್ನು ನಂಬಿಸಿದ್ದ.