ಬೆಂಗಳೂರು; ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ: ಬುಧವಾರ ಚಾರ್ಜ್ಶೀಟ್ ಸಲ್ಲಿಕೆ
ನಾಗೇಶ್ - ಆರೋಪಿ
ಬೆಂಗಳೂರು, ಆ.9: ಹೆಗ್ಗನಹಳ್ಳಿ ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಇಂದು(ಬುಧವಾರ) ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ ಮಾಡಲಿದ್ದಾರೆ.
ಮೂರು ತಿಂಗಳ ಸುದೀರ್ಘ ತನಿಖೆಯ ಬಳಿಕ ಪೊಲೀಸರು 13ನೆ ಎಸಿಎಂಎಂ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಲಿದ್ದು, ಒಟ್ಟು 770 ಪುಟಗಳ ಪ್ರಾಥಮಿಕ ಚಾರ್ಜ್ ಶೀಟ್ ಇದಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 92 ಸಾಕ್ಷಿಗಳನ್ನು ಉಲ್ಲೇಖಿಸಲಾಗಿದೆ. ಅದೇ ರೀತಿ, 164 ಜನರ ಹೇಳಿಕೆಗಳನ್ನೂ ದಾಖಲಿಸಿಕೊಳ್ಳಲಾಗಿದೆ. ಆರೋಪಿಯ ಧ್ವನಿ, ಇನ್ನಿತರೆ ದಾಖಲೆಗಳನ್ನು ಎಫ್ಎಸ್ಎಲ್ಗೆ ರವಾನೆ ಮಾಡಲಾಗಿತ್ತು. ಈಗ ಅದು ಆರೋಪಿ ನಾಗೇಶನ ಧ್ವನಿ ಎಂಬುದು ಖಚಿತವಾಗಿದೆ.
ಏನಿದು ಪ್ರಕರಣ?: ಪ್ರೀತಿ ನಿರಾಕರಿಸಿದ ಕಾರಣಕ್ಕೆ ಪ್ರೀತಿಸಿದ ಹುಡುಗಿಯ ಮೇಲೆ ಆಸಿಡ್ ದಾಳಿ ಮಾಡಿರುವ ದುರಂತ ಘಟನೆ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ನಡೆದಿತ್ತು. 23 ವರ್ಷದ ಸಂತ್ರಸ್ಥೆಯ ಮೇಲೆ ಸುಂಕದಕಟ್ಟೆಯ ಮುತ್ತೂಟು ಫಿನ್ಕಾರ್ಪ್ ಬಳಿ ಆರೋಪಿ ನಾಗೇಶ್ ಆ್ಯಸಿಡ್ ದಾಳಿ ನಡೆಸಿದ್ದ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.