BBMP ಇಂಜಿನಿಯರ್ ಸೋಗಿನಲ್ಲಿ ಸಿಎಂ ಗೃಹ ಕಚೇರಿಗೆ ಪ್ರವೇಶಿಸಿದ ಆರೋಪಿಯ ಬಂಧನ
ಪರಮೇಶ್ವರ್ - ಬಂಧಿತ ಆರೋಪಿ
ಬೆಂಗಳೂರು, ಆ.20: ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) ಎಂದು ಹೇಳಿಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಗೃಹ ಕಚೇರಿ ‘ಕೃಷ್ಣಾ’ ಪ್ರವೇಶಿಸಿದ್ದ ವ್ಯಕ್ತಿಯೋರ್ವನನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೀದರ್ ಮೂಲದ ಪರಮೇಶ್ವರ್ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.
17-8-2022 (ಬುಧವಾರ) ರಂದು ಬೆಳಗ್ಗೆ 11.30ರ ಸುಮಾರಿಗೆ ಆರೋಪಿಯು ‘ನಾನು ಬಿಬಿಎಂಪಿ ಎಇಇ. ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಅವರ ಆಪ್ತ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ಇರುವುದರಿಂದ ಬಂದಿರುವುದಾಗಿ ಕೃಷ್ಣಾದ ಗೇಟ್ನಲ್ಲಿ ಭದ್ರತೆಗೆ ನಿಯೋಜಿಸಿದ್ದ ಪೊಲೀಸ್ ಸಿಬ್ಬಂದಿಗೆ ಐಡಿ ಕಾರ್ಡ್ ತೋರಿಸಿ ಒಳಗೆ ಬಂದಿದ್ದಾನೆ.
ಈ ವೇಳೆ ಈತನ ವರ್ತನೆ ಕಂಡು ಅನುಮಾನಗೊಂಡ ಭದ್ರತಾ ಸಿಬ್ಬಂದಿ ಐಡಿ ಕಾರ್ಡ್ ಪರಿಶೀಲಿಸಿದಾಗ ಐಡಿ ಕಾರ್ಡ್ ನಕಲಿ ಎಂದು ತಿಳಿದ ಪೊಲೀಸರು ಆರೋಪಿ ಪರಮೇಶ್ವರ್ ಬಗ್ಗೆ ಬಿಬಿಎಂಪಿ ಹಾಗೂ ಗೃಹಕಚೇರಿ ಕೃಷ್ಣಾದಲ್ಲಿ ಕೆಲಸ ಮಾಡುವ ಅಧಿಕಾರಿಗಳನ್ನು ಸಂಪರ್ಕಿಸಿ ವಿಚಾರಿಸಿದ್ದಾರೆ. ಈತ ಯಾರೆಂಬುದೇ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ. ಹೀಗಾಗಿ ಆತನನ್ನು ವಶಕ್ಕೆ ಪಡೆದು ಹೈಗ್ರೌಂಡ್ಸ್ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿ ಪರಮೇಶ್ವರ್ ಬಿಬಿಎಂಪಿ ಇಂಜಿನಿಯರ್ ಎಂದು ನಕಲಿ ಐಡಿ ಕಾರ್ಡ್ ಸೃಷ್ಟಿಸಿ ಹಲವರಿಗೆ ಸರ್ಕಾರಿ ಕೆಲಸ ಕೊಡುವುದಾಗಿ ಹಣ ವಂಚಿಸಿದ್ದಾನೆ ಎನ್ನಲಾಗಿದೆ.
ಹೈಗ್ರೌಂಡ್ಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ... ಮಂಗಳೂರು: ಸಮುದ್ರದಲ್ಲಿ ಸ್ನಾನಕ್ಕೆ ಇಳಿದಿದ್ದ ಯುವಕ ನೀರುಪಾಲು