ಬೆಂಗಳೂರು: ಕಡಿಮೆ ಅಂಕದಿಂದಾಗಿ ಕಾನೂನು ಪದವಿಗೆ ಅವಕಾಶವಿಲ್ಲವೆಂದು ಯುವಕ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ಆ.21:ಕಾನೂನು ಪದವಿ ವ್ಯಾಸಂಗ ಮಾಡಲು ಅವಕಾಶ ದೊರೆಯದ ಹಿನ್ನೆಲೆಯಲ್ಲಿ ಮನನೊಂದು ಯುವಕನೋರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿರುವ ಘಟನೆ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಕುಂಬೇನಹಳ್ಳಿ ಗ್ರಾಮದ ಗೋಪಾಲ್ (22) ಆತ್ಮಹತ್ಯೆಗೆ ಶರಣಾದ ಯುವಕ ಎಂದು ಪೊಲೀಸರು ಗುರುತಿಸಿದ್ದಾರೆ.
ಮೃತ ಗೋಪಾಲ್ ಪಿಯುಸಿ ಹಾಗೂ ಐಟಿಐ ಪೂರ್ಣಗೊಳಿಸಿದ್ದ. ಕಾನೂನು (LLB) ಪದವಿ ವ್ಯಾಸಂಗ ಮಾಡಬೇಕೆಂದು ವಿವಿಧ ಕಾಲೇಜುಗಳಿಗೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ್ದ.ಆದರೆ, ಕಡಿಮೆ ಅಂಕ ಪಡೆದ ಹಿನ್ನೆಲೆ ಪ್ರವೇಶ ದೊರೆತಿರಲಿಲ್ಲ. ಹೀಗಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆಗೂ ಮುನ್ನ ಮೊಬೈಲ್ನಲ್ಲಿ ವಿಡಿಯೋ ಹೇಳಿಕೆ ನೀಡಿರುವ ಗೋಪಾಲ್, 'ನನ್ನ ಈ ಪರಿಸ್ಥಿತಿಗೆ ನಾನೇ ಕಾರಣ. ಇದಕ್ಕಾಗಿ ಯಾರೂ ಕಣ್ಣೀರು ಹಾಕುವ ಅವಶ್ಯಕತೆಯೂ ಇಲ್ಲ. ಅಲ್ಲದೇ, ಯಾರನ್ನೂ ದೂಷಿಸಬೇಡಿ' ಎಂದು ಹೇಳಿದ್ದಾನೆ. ಈ ಬಗ್ಗೆ ಕುದೂರು ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.