ಬೆಂಗಳೂರು: ಮಗುವನ್ನು ಕೊಂದು ತಾಯಿ ಆತ್ಮಹತ್ಯೆಗೆ ಯತ್ನ
ಸಾಂದರ್ಭಿಕ ಚಿತ್ರ
ಬೆಂಗಳೂರು, ಆ.22: ತನ್ನ ಮಗುವನ್ನು ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಎಚ್ಎಎಲ್ ವ್ಯಾಪ್ತಿಯಲ್ಲಿ ನಡೆದಿದೆ.
ಸಂಯುಕ್ತ(ಮೂರುವರೆ ವರ್ಷ) ಮೃತಪಟ್ಟ ಮಗು. ತಾಯಿ ಗಾಯತ್ರಿದೇವಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂಲತಃ ತಮಿಳುನಾಡಿನವರಾದ ನರೇಂದ್ರನ್ ಅವರು 5 ವರ್ಷದ ಹಿಂದೆ ಗಾಯತ್ರಿದೇವಿ ಅವರನ್ನು ಮದುವೆಯಾಗಿದ್ದು, ಇವರಿಗೆ ಸಂಯುಕ್ತ ಎಂಬ ಹೆಣ್ಣು ಮಗುವಿತ್ತು.
ಬೆಂಗಳೂರಿನ ದೊಡ್ಡನೆಕ್ಕುಂದಿಯ ಗುರುರಾಜ ಲೇಔಟ್ನ ಅಪಾರ್ಟ್ಮೆಂಟ್ವೊಂದರಲ್ಲಿ ಈ ಕುಟುಂಬ ವಾಸವಾಗಿದೆ. ನರೇಂದ್ರನ್ ಅವರು ಕಾರ್ಯನಿಮಿತ್ತ ತನ್ನ ಊರಾದ ತಮಿಳುನಾಡಿನ ಈರೋಡ್ಗೆ ಹೋಗಿದ್ದರು. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಗಾಯತ್ರಿದೇವಿಯವರು ರವಿವಾರ ರಾತ್ರಿ ತನ್ನ ಮಗುವನ್ನು ನೀರಿನ ಟಬ್ನಲ್ಲಿ ಮುಳುಗಿಸಿ ಸಾಯಿಸಿ ನಂತರ ಅವರು ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾರೆ. ಇದೇ ವೇಳೆಯಲ್ಲಿ ಪತಿ ನರೇಂದ್ರನ್ ಅವರು ಮನೆಗೆ ಬಂದು ಕಾಲಿಂಗ್ ಬೆಲ್ ಒತ್ತಿದ್ದಾರೆ. ಎಷ್ಟು ಹೊತ್ತಾದರೂ ಬಾಗಿಲು ತೆರೆಯದಿದ್ದಾಗ ಅವರೇ ಜೋರಾಗಿ ಬಾಗಿಲು ತಳ್ಳಿದಾಗ ತೆರೆದುಕೊಂಡಿದೆ.
ಒಳಗೆ ಹೋಗಿ ನೋಡುತ್ತಿದ್ದಂತೆ ಮಗು ನೀರಿನ ಟಬ್ನಲ್ಲಿ ಸತ್ತಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಫ್ಯಾನಿಗೆ ನೇಣು ಬಿಗಿದುಕೊಂಡಿದ್ದ ಪತ್ನಿಯನ್ನು ಗಮನಿಸಿ ತಕ್ಷಣ ನೇಣಿನಿಂದ ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಪರೀಕ್ಷಿಸಿ ಜೀವ ಇರುವುದನ್ನು ಖಾತ್ರಿಪಡಿಸಿ ಗಾಯತ್ರಿದೇವಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಈ ಸಂಬಂಧ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.