ಕೇಂದ್ರ ಸಾಹಿತ್ಯ ಅಕಾಡಮಿಯ ಯುವ ಸಾಹಿತ್ಯ ಪ್ರಶಸ್ತಿಗೆ ದಾದಾಪೀರ್, ಬಾಲ ಸಾಹಿತ್ಯ ಪ್ರಶಸ್ತಿಗೆ ತಮ್ಮಣ್ಣ ಆಯ್ಕೆ
ಹೊಸದಿಲ್ಲಿ, ಆ.24: ಕೇಂದ್ರ ಸಾಹಿತ್ಯ ಅಕಾಡಮಿ ನೀಡುವ 2022ರ ಯುವ ಸಾಹಿತ್ಯ ಪ್ರಶಸ್ತಿಗೆ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ದಾದಾಪೀರ್ ಜೈಮನ್ ಹಾಗೂ ಬಾಲ ಸಾಹಿತ್ಯ ಪ್ರಶಸ್ತಿಗೆ ಶಿರ್ಶಿ ಸಿದ್ದಾಪುರದ ತಮ್ಮಣ್ಣ ಬೀಗಾರ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು 50 ಸಾವಿರ ರೂ. ಹಾಗೂ ಸನ್ಮಾನವನ್ನು ಒಳಗೊಂಡಿರುತ್ತದೆ. ಪ್ರಶಸ್ತಿಗಳನ್ನು ಡಿಸೆಂಬರ್ ನಲ್ಲಿ ಹೊಸದಿಲ್ಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಕೇಂದ್ರ ಸಾಹಿತ್ಯ ಅಕಾಡಮಿಯ ಕನ್ನಡ ಸಲಹಾ ಸಮಿತಿಯ ಸಂಯೋಜಕ ಡಾ.ಸರಜೂ ಕಾಟ್ಕರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ದಾದಾಪೀರ್ ಅವರ 'ನೀಲಕುರಿಂಜಿ' ಕಥಾ ಸಂಕಲನಕ್ಕೆ ಯುವ ಸಾಹಿತ್ಯ ಪ್ರಶಸ್ತಿ ಬಂದಿದ್ದರೆ, ತಮ್ಮಣ್ಣ ಬೀಗಾರ ಅವರ 'ಬಾವಲಿ ಗುಹೆ' ಮಕ್ಕಳ ಕಾದಂಬರಿಗೆ ಬಾಲ ಸಾಹಿತ್ಯ ಪ್ರಶಸ್ತಿ ಸಂದಿದೆ. 'ನೀಲಕುರಿಂಜಿ'ಯನ್ನು ರಾಯಚೂರು ಜಿಲ್ಹೆಯ ಕೆ.ಗುಡುದಿನ್ನಿಯ ವೈಷ್ಣವಿ ಪ್ರಕಾಶನವು ಪ್ರಕಟಿಸಿದ್ದರೆ 'ಬಾವಲಿ ಗುಹೆ'ಯನ್ನು ಬೆಂಗಳೂರಿನ ಅಭಿನವ ಪ್ರಕಾಶನವು ಪ್ರಕಟಿಸಿದೆ.
ಯುವ ಸಾಹಿತ್ಯ ಪ್ರಶಸ್ತಿಯ ಜ್ಯೂರಿಗಳಾಗಿ ಸ ಉಷಾ, ನಗರಗೆರೆ ರಮೇಶ್ ಹಾಗೂ ಎನ್ ಎಸ್ ಗುಂಡೂರ ಕಾರ್ಯನಿರ್ವಹಿಸಿದ್ದರೆ, ಬಾಲ ಸಾಹಿತ್ಯ ಪ್ರಶಸ್ತಿಗೆ ಶಿವಲಿಂಗಪ್ಪ ಹಂದಿಹಾಳು, ಲೋಹಿತ್ ನಾಯ್ಕರ್ ಹಾಗೂ ಎಂ.ಎಚ್.ನಾಗರಾಜ್ ಜ್ಯೂರಿಗಳಾಗಿದ್ದರು.
ಪುಸ್ತಕ ಆಯ್ಕೆ ಪ್ರಕ್ರಿಯೆಯು ಕೇಂದ್ರ ಸಾಹಿತ್ಯ ಅಕಾಡಮಿಯ ಕನ್ನಡ ಸಲಹಾ ಸಮಿತಿಯ ಸಂಯೋಜಕ ಡಾ ಸರಜೂ ಕಾಟ್ಕರ್ ಉಸ್ತುವಾರಿಯಲ್ಲಿ ನಡೆದಿದೆ ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿ ವಿಜೇತರನ್ನು ಕೇಂದ್ರ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಡಾ ಚಂದ್ರಶೇಖರ ಕಂಬಾರ ಅಭಿನಂದಿಸಿದ್ದಾರೆ.