ಬೆಂಗಳೂರು: 'ಪೂಜೆ ಮಾಡದಿದ್ದರೆ ಸಾವು ಸಂಭವಿಸಲಿದೆʼ ಎಂದು ಚಿನ್ನಾಭರಣ ದೋಚಿದ ಬುಡುಬುಡಿಕೆ ವೇಷಧಾರಿ
ಸಾಂದರ್ಭಿಕ ಚಿತ್ರ
ಬೆಂಗಳೂರು: ವಿಶೇಷ ಪೂಜೆ ಮಾಡಿಲ್ಲವೆಂದರೆ ನಿಮ್ಮ ಮನೆಯಲ್ಲಿ ಸಾವು ಸಂಭವಿಸಲಿದೆ ಎಂದು ಕತೆ ಕಟ್ಟಿ ಬುಡಬುಡಿಕೆ ವೇಷಧಾರಿಯೊಬ್ಬ ಮಹಿಳೆಯೊಬ್ಬರ ಬಳಿ ಚಿನ್ನಾಭರಣ ದೋಚಿಸಿರುವ ಘಟನೆ ಇಲ್ಲಿನ ಜ್ಞಾನಭಾರತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವರದರಾಜು ಎಂಬುವವರ ತಂದೆ ಇತ್ತೀಚೆಗೆ ಮೃತಪಟ್ಟಿದ್ದು, ಇದನ್ನು ಅರಿತ ಬುಡಬುಡಿಕೆ ವ್ಯಕ್ತಿಯೊರ್ವ ಈ ಮನೆಯಲ್ಲಿ ಮತ್ತೆ ಮೂರು ಸಾವಾಗುತ್ತದೆ ಎಂದು ಹೇಳಿದ್ದ. ಇದನ್ನು ಕೇಳಿ ದಂಪತಿ ಬೆದರಿದ್ದರು. ನಂತರ ಮಾರನೇ ದಿನವೂ ಬಂದಿದ್ದ ಆತ, ಮನೆಯಲ್ಲಿ ವರದರಾಜು ಪತ್ನಿ ಒಬ್ಬರೇ ಇರುವುದನ್ನು ಗಮನಿಸಿ ಪೂಜೆ ಮಾಡಬೇಕು, ಅದಕ್ಕಾಗಿ 5ಸಾವಿರ ರೂಪಾಯಿ ಆಗುತ್ತದೆ ಎಂದು ಆತ ಹೇಳಿದ್ದ ಎನ್ನಲಾಗಿದೆ.
ಬುಡಬುಡಿಕೆಯವನಿಗೆ 5 ಸಾವಿರ ರೂಪಾಯಿ ಕೊಟ್ಟ ಬಳಿಕ ವರದರಾಜು ಪತ್ನಿಗೆ ಕಪ್ಪು ಪುಡಿಯನ್ನು ಹಣೆಗೆ ಹಚ್ಚಿದ್ದಾನೆ. ಈ ಸಂದರ್ಭದಲ್ಲಿ ಮೈಮೇಲಿದ್ದ ಒಡವೆಗಳನ್ನು ಆತ ದೋಚಿ ಪರಾರಿಯಾಗಿದ್ದಾನೆ. ಪತಿ ವರದರಾಜು ಬಂದ ಬಳಿಕ ವಿಚಾರಣೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಜ್ಞಾನಭಾರತಿ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.