ಮೋದಿಯವರೇ, ರಾಜ್ಯ ಬಿಜೆಪಿ ಸರಕಾರದ 40% ಕಮಿಷನ್ ದಂಧೆ, ಹಗರಣಗಳ ಕುರಿತು ಮಾತನಾಡುವಿರಾ: ದಿನೇಶ್ ಗುಂಡೂರಾವ್ ಪ್ರಶ್ನೆ
ಬೆಂಗಳೂರು, ಸೆ.2: "ಇಂದು ಮಂಗಳೂರಿಗೆ ಬರುತ್ತಿರುವ ಮೋದಿಯವರಿಗೆ ಸ್ವಾಗತ. ಯಥಾಪ್ರಕಾರ ಇಂದೂ ಕೂಡ ಮೋದಿಯವರ ಬುರುಡೆ ಭಾಷಣ ಚರ್ವಿತ ಚರ್ವಣದಂತೆ ರಿಪೀಟ್ ಆಗಲಿದೆ. ಆದರೂ ಮೋದಿಯವರ ಬುರುಡೆ ಭಾಷಣ ಕೇಳುವ ಅನಿವಾರ್ಯ ಕರ್ಮ ಕನ್ನಡಿಗರದ್ದು. ಮೋದಿಯವರೆ ಇಂದಾದರೂ ಹೇಳಿದನ್ನೇ ಹೇಳುವ ಕಿಸಬಾಯಿ ದಾಸ ಎಂಬಂತೆ ಸುಳ್ಳು ಭಾಷಣ ಬಿಟ್ಟು ಸತ್ಯ ಮಾತನಾಡುತ್ತೀರಾ.?" ಎಂದು ಮಾಜಿ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, "ಮೋದಿಯವರೆ, ಇಂದಿನ ನಿಮ್ಮ ಭಾಷಣದಲ್ಲಿ ರಾಜ್ಯ BJP ಸರ್ಕಾರದ 40% ಕಮಿಷನ್ ದಂಧೆ, PSI ಹಗರಣ, KPTCL ನೇಮಕಾತಿ ಹಗರಣ, ಉಪನ್ಯಾಸಕರ ನೇಮಕಾತಿ ಹಗರಣ, ಜ್ಯೂ.ಇಂಜಿನಿಯರ್ ನೇಮಕಾತಿ ಹಗರಣ ಹಾಗೂ ನಿಮ್ಮ ಪಕ್ಷ 2018ರ ಪ್ರಣಾಳಿಕೆಯಲ್ಲಿ 600 ವಚನ ಕೊಟ್ಟು ಒಂದನ್ನೂ ಈಡೇರಿಸದೆ ವಚನ ವಂಚನೆಯ ಬಗ್ಗೆ ಮಾತಾಡುವಿರಾ.? ನಿಮ್ಮ ಪಾರದರ್ಶಕತೆಗೆ ಸವಾಲು ಇದು." ಎಂದು ಹೇಳಿದ್ದಾರೆ.
"ಮೋದಿಯವರೆ, ಇಂದಿನ ನಿಮ್ಮ ಭಾಷಣದಲ್ಲಿ ರಾಜ್ಯಕ್ಕೆ ಕೇಂದ್ರದಿಂದ GST ಬಾಕಿ ಯಾಕೆ ಕೊಟ್ಟಿಲ್ಲ, 15ನೇ ಹಣಕಾಸು ಆಯೋಗ ನೀಡಿದ್ದ ವಿಶೇಷ ಅನುಧಾನ ರಾಜ್ಯಕ್ಕೆ ಕೊಡದಿರುವುದು ಯಾಕೆ ? 2014ರಲ್ಲಿ 52 ಲಕ್ಷ ಕೋಟಿ ರೂ. ಇದ್ದ ದೇಶದ ಸಾಲ ನಿಮ್ಮ ಅಧಿಕಾರಾವಧಿಯಲ್ಲಿ 1.42 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದ್ದು ಯಾಕೆ.? ಎಂಬ ಬಗ್ಗೆ ದಯವಿಟ್ಟು ಮಾತನಾಡುವಿರಾ.?" ಎಂದು ಪ್ರಶ್ನಿಸಿದ್ದಾರೆ.
ಮೋದಿಯವರೇ, ಇಂದಿನ ನಿಮ್ಮ ಭಾಷಣದಲ್ಲಿ ತೈಲಬೆಲೆ ಯದ್ವಾತದ್ವಾ ಏರಿಕೆಯಾಗಿದ್ದು ಯಾಕೆ.? ರೂ.80 ಇದ್ದ ಅಡುಗೆ ಎಣ್ಣೆ ರೂ.180ರ ಗಡಿ ದಾಟಿದ್ದು ಯಾಕೆ.? ರೂ.400 ಇದ್ದ ಸಿಲಿಂಡರ್ ಬೆಲೆ ಸಾವಿರ ತಲುಪಿದ್ದು ಹೇಗೆ? ರೂ.30 ಇದ್ದ ಸಾಬೂನು ರೂ.60 ಆಗಿದ್ದು ಹೇಗೆ? ತಿನ್ನುವ ಅನ್ನಕ್ಕೂ ನಿಮ್ಮ ಸರ್ಕಾರ GST ಹಾಕಿ ದೋಚುತ್ತಿರುವ ಬಗ್ಗೆ ಮಾತನಾಡುವಿರಾ.?
ಮೋದಿಯವರೆ, ಇಂದಿನ ನಿಮ್ಮ ಭಾಷಣದಲ್ಲಿ PM Cares ಹೆಸರಲ್ಲಿ ಸಂಗ್ರಹಿಸಿದ ಸಾವಿರಾರು ಕೋಟಿ ಹಣ ಎಲ್ಲಿ ಹೋಯಿತು? ಆಪರೇಷನ್ ಕಮಲಕ್ಕೆ ಬಳಕೆಯಾಗುವ ದುಡ್ಡಿನ ಮೂಲ ಯಾವುದು? BJPಯವರ ಮೇಲೆ ED, IT ಮತ್ತು CBI ದಾಳಿ ನಡೆಯದ ರಹಸ್ಯವೇನು.? ರೈತರ ಸಾಲ ಮನ್ನಾ ಮಾಡದೆ ಕಾರ್ಪೊರೇಟ್ ಕುಳಗಳ ಲಕ್ಷ ಲಕ್ಷ ಕೋಟಿ ರೂ. ತೆರಿಗೆ ಮನ್ನಾ ಮಾಡಿದ ಬಗ್ಗೆ ಮಾತನಾಡುವಿರಾ.? ಎಂದು ಸವಾಲೆಸೆದಿದ್ದಾರೆ.
1
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) September 2, 2022
ಇಂದು ಮಂಗಳೂರಿಗೆ ಬರುತ್ತಿರುವ #Modi ಯವರಿಗೆ ಸ್ವಾಗತ.
ಯಥಾಪ್ರಕಾರ ಇಂದೂ ಕೂಡ ಮೋದಿಯವರ ಬುರುಡೆ ಭಾಷಣ ಚರ್ವಿತ ಚರ್ವಣದಂತೆ ರಿಪೀಟ್ ಆಗಲಿದೆ.
ಆದರೂ ಮೋದಿಯವರ ಬುರುಡೆ ಭಾಷಣ ಕೇಳುವ ಅನಿವಾರ್ಯ ಕರ್ಮ ಕನ್ನಡಿಗರದ್ದು.
ಮೋದಿಯವರೆ ಇಂದಾದರೂ ಹೇಳಿದನ್ನೇ ಹೇಳುವ ಕಿಸಬಾಯಿ ದಾಸ ಎಂಬಂತೆ ಸುಳ್ಳು ಭಾಷಣ ಬಿಟ್ಟು ಸತ್ಯ ಮಾತನಾಡುತ್ತೀರಾ?