ಆಸ್ತಿ ಅವ್ಯವಹಾರ ಆರೋಪ: ಮುರುಘಾ ಶ್ರೀ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದ ಬೆಂಗಳೂರಿನ ಎಸಿಎಂಎಂ ನ್ಯಾಯಾಲಯ
ಬೆಂಗಳೂರು, ಸೆ.2: ಕೆಂಗೇರಿ ಹೋಬಳಿಯ ಸೂಲಿಕೆರೆ ಗ್ರಾಮದಲ್ಲಿ ಮುರುಘಾ ಮಠಕ್ಕೆ ಸೇರಿದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಮೀನನ್ನು ಮಾರುಕಟ್ಟೆ ಬೆಲೆಗಿಂತ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಿದ ಪ್ರಕರಣದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಬೆಂಗಳೂರಿನ ಎಸಿಎಂಎಂ ಕೋರ್ಟ್ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.
ಚಿತ್ರದುರ್ಗ ಮಠದ ಆಸ್ತಿ ಮಾರಾಟ ಕುರಿತಂತೆ ತುಮಕೂರಿನ ಪಿ.ಎಸ್.ಪ್ರಕಾಶ್ ಎಂಬುವರು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ, ದೂರುದಾರರಿಂದ ಹೇಳಿಕೆ ದಾಖಲಿಸಿಕೊಂಡಿದೆ.
ಆರೋಪಿಯಾಗಿರುವ ಮುರುಘಾ ಶರಣರಿಗೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ಇದೇ ಪ್ರಕರಣದಲ್ಲಿ 2ನೆ ಆರೋಪಿಯಾಗಿರುವ ಆನಂದ್ ಕುಮಾರ್ ಎನ್ನುವವರಿಗೆ ಜಾಮೀನು ರಹಿತ ವಾರೆಂಟ್ ಮರು ಜಾರಿ ಮಾಡಿ ವಿಚಾರಣೆಯನ್ನು ನ.10ಕ್ಕೆ ಮುಂದೂಡಿದೆ. ಮುರುಘಾ ಶ್ರೀಗಳ ವಿರುದ್ಧ ಕೋರ್ಟ್ ಮೊರೆ ಹೋಗಿರುವ ಅರ್ಜಿದಾರರು, ಬಹಳಷ್ಟು ಮೌಲ್ಯದ ಜಮೀನನ್ನು ಬಹಳ ಕಡಿಮೆ ಬೆಲೆಗೆ ಮಾರಾಟ ಮಾಡಿ ಮಠಕ್ಕೆ ಕೊಟ್ಯಂತರ ರೂ.ಗಳ ನಷ್ಟ ಉಂಟು ಮಾಡಲಾಗಿದೆ. ಭಕ್ತರಿಗೆ ನಂಬಿಕೆ ದ್ರೋಹ ಸಹ ಮಾಡಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.