ಎಚ್ಎಎಲ್ಗೆ ಮತ್ತೊಂದು ಸದಾವಕಾಶ: ದ್ರೌಪದಿ ಮುರ್ಮು
ಬೆಂಗಳೂರಲ್ಲಿ ರಾಕೆಟ್ ಎಂಜಿನ್ ಉತ್ಪಾದನಾ ಘಟಕ ಉದ್ಘಾಟಿಸಿದ ರಾಷ್ಟ್ರಪತಿ ಮುರ್ಮು
ಬೆಂಗಳೂರು, ಸೆ.27: ಕ್ರಯೋಜಿನಿಕ್ ಇಂಜಿನ್ಗಳನ್ನು ದೇಶದಲ್ಲೆ ಉತ್ಪಾದಿಸುವ ಮೂಲಕ ಬೆಂಗಳೂರಿನ ಎಚ್ಎಎಲ್ಗೆ ಮತ್ತೊಮ್ಮೆ ತನ್ನ ಸಾಮರ್ಥ್ಯ ತೋರಿಸುವ ಸದಾವಕಾಶ ಒದಗಿ ಬಂದಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.
ಮಂಗಳವಾರ ನಗರದ ಎಚ್ಎಎಲ್ನಿಂದ ಪ್ರಾಯೋಗಿಕ ಕ್ರಯೋಜಿನಿಕ್ ಉತ್ಪಾದನಾ ಸೌಲಭ್ಯ ಉದ್ಘಾಟನೆ ಹಾಗೂ ರಾಷ್ಟ್ರೀಯ ವೈರಾಲಾಜಿ ಕೇಂದ್ರದ ಶಂಕುಸ್ಥಾಪನೆ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ಅತ್ಯಾಧುನಿಕ ತಂತ್ರಜ್ಞಾನದಡಿ ಕ್ರಯೋಜಿನಿಕ್ ಇಂಜಿನ್ ಉತ್ಪಾದನೆ ದೇಶದ ವಿಜ್ಞಾನ ಕ್ಷೇತ್ರದಲ್ಲಿ ಒಂದು ದೊಡ್ಡ ಮೈಲಿಗಲ್ಲು. ಇನ್ನೂ, ಕ್ರಯೋಜಿನಿಕ್ ಇಂಜಿನ್ ಉತ್ಪಾದಿಸುತ್ತಿರುವ ಜಗತ್ತಿನ ಆರು ದೇಶದಲ್ಲಿ ಭಾರತವೂ ಒಂದು. ಅತ್ಯಾಧುನಿಕ ತಂತ್ರಜ್ಞಾನದಡಿ ಕ್ರಯೋಜನಿಕ್ ಇಂಜಿನ್ ಉತ್ಪಾದನಾ ಕಾರ್ಯ ಒಂದು ದೊಡ್ಡ ಮೈಲಿಗಲ್ಲು ಎಂದು ರಾಷ್ಟ್ರಪತಿ ಬಣ್ಣಿಸಿದರು.
ಕ್ರಯೋಜಿನಿಕ್ ಇಂಜಿನ್ ಬಾಹ್ಯಾಕಾಶ ಉಪಗ್ರಹ ವಾಹಕಗಳಿಗೆ ಅತಿ ಅವಶ್ಯಕ. ಅಲ್ಲದೆ, ಎಚ್ಎಎಲ್ 1993 ರಿಂದಲೂ ಇಸ್ರೋದ ಬಾಹ್ಯಾಕಾಶ ಸಂಶೋಧನೆಗಳಿಗೆ ಒತ್ತಾಸೆಯಾಗಿ ನಿಂತಿದೆ ಎಂದು ಅವರು ಹೇಳಿದರು.