ರಾಜ್ಯದ 40 ಪರ್ಸೆಂಟ್ ಕಮಿಷನ್ ಸರಕಾರ ಗಂಗೊಳ್ಳಿ ಬಂದರಿನಲ್ಲಿ ಮುಳುಗಿದೆ: ಸಿದ್ದರಾಮಯ್ಯ
ಗಂಗೊಳ್ಳಿಯ ಮೀನುಗಾರಿಕಾ ಬಂದರು ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಜಟ್ಟಿ ಬುಧವಾರ ಸಂಜೆ ಕುಸಿದಿದೆ.
ಬೆಂಗಳೂರು, ಸೆ.29: ಗಂಗೊಳ್ಳಿಯ ಮೀನುಗಾರಿಕಾ ಬಂದರು ಪ್ರದೇಶದಲ್ಲಿ 12 ಕೋಟಿ ರೂ. ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಜಟ್ಟಿ ಬುಧವಾರ ಸಂಜೆ ಕುಸಿದಿದ್ದು, ಈ ಕಾಮಗಾರಿಯಲ್ಲಿ ಗುತ್ತಿಗೆದಾರರು ರಾಜ್ಯ ಬಿಜೆಪಿಗೆ ನೀಡಿದ್ದ ಕಮಿಷನ್ ಎಷ್ಟು? ಎನ್ನುವ ಬಗ್ಗೆ ತನಿಖೆಯಾಗಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ, "ರಾಜ್ಯದ 40 ಪರ್ಸೆಂಟ್ ಕಮಿಷನ್ ಸರ್ಕಾರ ಕುಂದಾಪುರ ತಾಲೂಕಿನ ಗಂಗೊಳ್ಳಿ ಬಂದರಿನಲ್ಲಿ ಮುಳುಗಿದೆ. 12 ಕೋಟಿ ರುಪಾಯಿ ವೆಚ್ಚದ ಜಟ್ಟಿ ನಿರ್ಮಾಣ ಹಂತದಲ್ಲೇ ನದಿ ನೀರಿನಪಾಲಾಗಿದೆ. ಈ ಕಾಮಗಾರಿಯಲ್ಲಿ ಗುತ್ತಿಗೆದಾರ ರಾಜ್ಯ ಬಿಜೆಪಿಗೆ ನೀಡಿದ್ದ ಕಮಿಷನ್ ಎಷ್ಟು? ಎನ್ನುವ ಬಗ್ಗೆ ತನಿಖೆಯಾಗಲಿ" ಎಂದು ಒತ್ತಾಯಿಸಿದ್ದಾರೆ.
ಕುಂದಾಪುರ ತಾಲೂಕಿನ ಗಂಗೊಳ್ಳಿಯ ಮೀನುಗಾರಿಕಾ ಬಂದರು ಪ್ರದೇಶದಲ್ಲಿ ಸುಮಾರು 150 ಮೀಟರಿಗೂ ಅಧಿಕ ಉದ್ದದ ಜೆಟ್ಟಿ ಬುಧವಾರ ಸಂಜೆ ಕುಸಿದಿದೆ. ಅವೈಜ್ಞಾನಿಕವಾಗಿ ನಡೆಯುತ್ತಿರುವ ಕಾಮಗಾರಿಯಿಂದಾಗಿ ಇದು ಕುಸಿದಿದೆ ಇದರ ವಿರುದ್ಧ ಸ್ಥಳೀಯ ಮೀನುಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಗಂಗೊಳ್ಳಿ ಬಂದರು ಜೆಟ್ಟಿ ಕುಸಿತ: ಅವೈಜ್ಞಾನಿಕ ಕಾಮಗಾರಿ ಆರೋಪ
ರಾಜ್ಯದ #40Percent ಕಮಿಷನ್ ಸರ್ಕಾರ ಇಂದು ಕುಂದಾಪುರ ತಾಲೂಕಿನ ಗಂಗೊಳ್ಳಿ ಬಂದರಿನಲ್ಲಿ ಮುಳುಗಿದೆ.
— Siddaramaiah (@siddaramaiah) September 29, 2022
12 ಕೋಟಿ ರುಪಾಯಿ ವೆಚ್ಚದ ಜಟ್ಟಿ ನಿರ್ಮಾಣ ಹಂತದಲ್ಲೇ ನದಿ ನೀರಿನ ಪಾಲಾಗಿದೆ. ಈ ಕಾಮಗಾರಿಯಲ್ಲಿ ಗುತ್ತಿಗೆದಾರ @BJP4Karnataka ಗೆ ನೀಡಿದ್ದ ಕಮಿಷನ್ ಎಷ್ಟು? ಎನ್ನುವ ಬಗ್ಗೆ ತನಿಖೆಯಾಗಲಿ. @KotasBJP @AngaraSBJP pic.twitter.com/CxbyE0Jn5u