ಸಹಕಾರ ಸಂಘದ ಹೆಸರಿನಲ್ಲಿ ವಂಚನೆ ಆರೋಪ: ನಿರ್ದೇಶಕ ಸೆರೆ, ಮತ್ತೋರ್ವ ಆರೋಪಿಗಾಗಿ ಶೋಧ
ಸಾಂದರ್ಭಿಕ ಚಿತ್ರ
ಬೆಂಗಳೂರು, ಅ.1: ಎನ್ಟಿಐ ಗೃಹ ನಿರ್ಮಾಣ ಸಹಕಾರ ಸಂಘದ ಹೆಸರಿನಲ್ಲಿ ವಂಚನೆಗೈದಿರುವ ಆರೋಪ ಸಂಬಂಧ ನಿರ್ದೇಶಕ ಹಾಗೂ ಸಿಇಒನೋರ್ವನನ್ನು ಇಲ್ಲಿನ ಶೇಷಾದ್ರಿಪುರಂ ಠಾಣಾ ಪೊಲೀಸರು ಬಂಧಿಸಿದ್ದು, ಇದೇ ಪ್ರಕರಣದಲ್ಲಿ ಮಾಜಿ ಅಧ್ಯಕ್ಷ ಪರಾರಿಯಾಗಿರುವ ಆರೋಪ ಕೇಳಿಬಂದಿದೆ.
ಎನ್ಟಿಐ ಹಾಲಿ ನಿರ್ದೇಶಕ ರಾಮಕೃಷ್ಣರೆಡ್ಡಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತಾಪ್ ಚಂದ್ ರಾಥೋಡ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಎನ್ಟಿಐ ಯಿಂದ ಕೊಡಿಗೇಹಳ್ಳಿ ಬಳಿ ನಿರ್ಮಿಸಿರುವ ಲೇಔಟ್ನಲ್ಲಿ ಬಿಡಿಎ ಅನುಮೋದಿತ ನಕ್ಷೆಯಲ್ಲಿರುವ ನಿವೇಶನಗಳನ್ನು ಮಾರಾಟ ಮಾಡಲು ಎನ್ಟಿಐ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಅನುಮತಿಯಿತ್ತು. ಆದರೆ ಬಿಡಿಎ ನಕ್ಷೆಯಲ್ಲಿ ಅನುಮೋದನೆ ಪಡೆಯದೇ ಇರುವ ನಿವೇಶನಗಳನ್ನು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ದೂರು ದಾಖಲಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನೂ, ಇದೇ ಪ್ರಕರಣದಲ್ಲಿ ಮಾಜಿ ಅಧ್ಯಕ್ಷ ನಕಲಿ ದಾಖಲೆ ಸೃಷ್ಟಿಸಿ ನಿವೇಶನಗಳನ್ನು ಮಾರಾಟ ಮಾಡಿ ವಂಚನೆಗೈದಿರುವ ಆರೋಪ ಕೇಳಿಬಂದಿದ್ದು, ಸದ್ಯ ಆತ ಪರಾರಿಯಾಗಿದ್ದಾನೆಎಂದು ಹೇಳಲಾಗುತ್ತಿದೆ.