ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ: ಆಸ್ಪತ್ರೆಗೆ ದಾಖಲು
ಸಾಂದರ್ಭಿಕ ಚಿತ್ರ
ಬೆಂಗಳೂರು, ಅ.3: ನಗರದಲ್ಲಿ ನಾಯಿಗಳ ಗುಂವೊಂದು ಏಕಾಏಕಿ ಎಂಟು ವರ್ಷದ ಬಾಲಕನ ಮೇಲೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ವರದಿಯಾಗಿದೆ.
ಕೊಪ್ಪಳ ಮೂಲದ ಈರಣ್ಣ ಎಂಬುವರ ಪುತ್ರ ಯಶವಂತ(8) ನಾಯಿ ದಾಳಿಯಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆಎಂದು ತಿಳಿದುಬಂದಿದೆ.
ರವಿವಾರ ಶಾಲೆಯಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮ ಮುಗಿಸಿ ಮನೆಗೆ ವಾಪಸಾಗುವಾಗ ನಾಲ್ಕೈದು ನಾಯಿಗಳು ಯಶವಂತ ಮೇಲೆ ದಾಳಿ ಮಾಡಿವೆ. ಆಗ ಚೀರಾಟವನ್ನು ಕೇಳಿದ ಸ್ಥಳೀಯರು ನಾಯಿಗಳಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ನರ್ಸರಿಯಲ್ಲಿ ಕೂಲಿ ಕೆಲಸಕ್ಕೆ ತೆರಳಿದ್ದ ಬಾಲಕನ ತಂದೆ ಈರಣ್ಣನಿಗೆ ಮಾಹಿತಿ ತಿಳಿಸಿದ್ದು, ಬಳಿಕ ಮಗನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದೊಯ್ದರು. ಇನ್ನೂ ಬಾಲಕನ ಎಡ ಕಿವಿಯ ಕೆಳಗಡೆ ಕುತ್ತಿಗೆ ಭಾಗದಲ್ಲಿ ಆಳವಾದ ಗಾಯವಾಗಿದ್ದು, ನಾಲ್ಕಕ್ಕೂ ಹೆಚ್ಚಿನ ಹೊಲಿಗೆ ಹಾಕಲಾಗಿದೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಪಶುಸಂಗೋಪನಾ ಇಲಾಖೆ ಜಂಟಿ ನಿರ್ದೇಶಕ ರವಿಕುಮಾರ್ ಮೈಸೂರು, ಘಟನೆಯ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಪಾಲಿಕೆ ನಿಯಮಾವಳಿ ಪ್ರಕಾರ ಚಿಕಿತ್ಸೆಗೆ ಖರ್ಚು ಮಾಡಿದ ಮೊತ್ತವನ್ನು ಪರಿಹಾರ ಮತ್ತು ಮರುಪಾವತಿ ಮಾಡುತ್ತೇವೆ ಎಂದು ಹೇಳಿದರು.