ಪ್ರವರ್ಗ 2 'ಬಿ' ಮೀಸಲಾತಿ ಶೇ.8ಕ್ಕೆ ಹೆಚ್ಚಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ
ಬೆಂಗಳೂರು: ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಮುಸ್ಲಿಮ್ ಸಮುದಾಯಕ್ಕೆ ರಾಜ್ಯ ಸರಕಾರವು ಪ್ರವರ್ಗ 2 ಬಿ ಯಲ್ಲಿ ನೀಡಿರುವ ಶೇಕಡಾ 4 ರ ಮೀಸಲಾತಿಯನ್ನು ಶೇಕಡಾ 8ಕ್ಕೆ ಏರಿಸಲು ಸರಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಕರ್ನಾಟಕ ಮುಸ್ಲಿಮ್ ಯುನಿಟಿ ಸಂಘಟನೆಯು ಒತ್ತಾಯಿಸಿದೆ.
ಬೆಂಗಳೂರಿನಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರನ್ನು ಭೇಟಿಯಾದ ಸಂಘಟನೆಯ ಸಂಚಾಲಕರಾದ ಜಬ್ಬಾರ್ ಕಲ್ಬುರ್ಗಿ ಮತ್ತು ಪತ್ರಕರ್ತ ಬಿ.ಎಂ.ಹನೀಫ್ ನೇತೃತ್ವದ ನಿಯೋಗವು ಈ ನಿಟ್ಟಿನಲ್ಲಿ ವಿಸ್ತ್ರತವಾದ ಮನವಿ ಪತ್ರವನ್ನು ನೀಡಿತು. ಆಯೋಗದ ಸದಸ್ಯೆ ಶಾರದಾ ನಾಯಕ್ ಅವರೂ ಈ ಸಂದರ್ಭದಲ್ಲಿ ಹಾಜರಿದ್ದರು.
ಮನವಿ ಪತ್ರವನ್ನು ಸ್ವೀಕರಿಸಿ ನಿಯೋಗದ ಸದಸ್ಯರ ಜೊತೆ ಚರ್ಚೆ ನಡೆಸಿದ ಜಯಪ್ರಕಾಶ್ ಹೆಗ್ಡೆ ಅವರು, ತಾವು ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಮುಸ್ಲಿಮರ ನಿಯೋಗವೊಂದು ಅಧಿಕೃತವಾಗಿ ಭೇಟಿಯಾಗಿ ಮನವಿ ಅರ್ಪಿಸಿದೆ. ಮನವಿಯನ್ನು ಸಹಾನುಭೂತಿಯಿಂದ ಪರಿಶೀಲಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
"ರಾಜ್ಯ ಸರಕಾರವು ಈ ಹಿಂದೆ ನೇಮಿಸಿದ ಹಿಂದುಳಿದ ವರ್ಗಗಳ ಎಲ್ಲ ಆಯೋಗಗಳೂ ಮುಸ್ಲಿಮರು ತೀವ್ರ ಹಿಂದುಳಿದ ಸಮುದಾಯವೆಂದು ಗುರುತಿಸಿದೆ. ಕಾಂತರಾಜು ಅಧ್ಯಕ್ಷತೆಯ ಆಯೋಗವು ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆಯು ಶೇಕಡಾ 16 ರಷ್ಟು ಇದೆ ಎಂದು ಗುರುತಿಸಿದೆ. ಈ ಜನಸಂಖ್ಯೆ ಮತ್ತು ಹಿಂದುಳಿದಿರುವಿಕೆಗೆ ಅನುಗುಣವಾಗಿ 2 ಬಿ ಪ್ರವರ್ಗದ ಮೀಸಲಾತಿಯನ್ನು ಶೇಕಡಾ 8 ಕ್ಕೆ ಹೆಚ್ಚಿಸಬೇಕಾದ ಅಗತ್ಯವಿದೆ. ಮುಸ್ಲಿಮರ ಹಿಂದುಳಿದಿರುವಿಕೆಯ ಸದ್ಯದ ಸ್ಥಿತಿ ಗತಿಯನ್ನು ತಿಳಿದುಕೊಳ್ಳಲು ಅಗತ್ಯ ಬಿದ್ದರೆ ಪ್ರತ್ಯೇಕ ಸಮೀಕ್ಷೆಯನ್ನು ನಡೆಸಬೇಕು" ಎಂದು ನಿಯೋಗದ ಸದಸ್ಯರು ಒತ್ತಾಯಿಸಿದ್ದಾರೆ.
ನಿಯೋಗದಲ್ಲಿ ರಿಯಾಜ್ ಮುಲ್ಲಾ, ಮೌಲಾನಾ ಮಹಮ್ಮದ್ ಯೂನುಸ್, ಎಂ.ಎಲ್.ಸರ್ಕಾವಸ್, ನಝೀರ್ ಹರ್ಕಾರಿ, ಅಲ್ತಾಫ್ ಕಲ್ಬುರ್ಗಿ ಮತ್ತು ಚಿಕ್ಕಮಗಳೂರಿನ ಕೆ.ಎ.ಇಮ್ದಾದ್ ಇದ್ದರು.