ಒಂದೇ ಠಾಣೆಯಲ್ಲಿ ಪೊಲೀಸ್ ದಂಪತಿ ಕೆಲಸ ಮಾಡಲು ಅನುಮತಿ ಕೋರಿ ಸರಕಾರಕ್ಕೆ ಮನವಿ: ಡಿಜಿಪಿ ಪ್ರವೀಣ್ ಸೂದ್
ಬೆಂಗಳೂರು, ಅ.31: ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗಂಡ-ಹೆಂಡತಿ ಒಂದೇ ಠಾಣೆಯಲ್ಲಿ ಕೆಲಸ ಮಾಡಲು ಅನುಮತಿ ನೀಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಡಿಜಿ-ಐಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ.
ಸೋಮವಾರ ಕೋರಮಂಗಲ ಕೆಎಸ್ಆರ್ ಪಿ ಮೈದಾನದಲ್ಲಿ ನಡೆದ ಪೊಲೀಸ್ ಕವಾಯತಿನಲ್ಲಿ ಅವರು ಭಾಗವಹಿಸಿದರು. ಸರ್ದಾರ್ ವಲ್ಲಭಬಾಯ್ ಪಟೇಲ್ ಜನ್ಮದಿನ ಸಲುವಾಗಿ ಗೌರವ ವಂದನೆ ಸಲ್ಲಿಸಿದರು. ಬಳಿಕ ಮಾತನಾಡಿದ ಸೂದ್, ಪೊಲೀಸರ ಕಲ್ಯಾಣಕ್ಕಾಗಿ ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಪತಿ-ಪತ್ನಿ ಪೊಲೀಸರಾಗಿದ್ದರೆ ಒಂದೇ ಕಡೆ ಕಾರ್ಯನಿರ್ವಹಿಸಲು ಸರಕಾರಕ್ಕೆ ಮನವಿ ಮಾಡಲಾಗಿದೆ. ಈ ಹಿಂದೆ ಒಂದೇ ಕಡೆ ಕೆಲಸ ಮಾಡುವ ಅವಕಾಶವಿತ್ತು. ಬಳಿಕ ನಾನಾ ಕಾರಣಗಳಿಂದ ಸ್ಥಗಿತವಾಗಿತ್ತು. ಹೀಗಾಗಿ ಮತ್ತೆ ಅನುಮತಿ ನೀಡಲು ಕೇಳಿದ್ದು, ಸರಕಾರ ಮನವಿ ಪೂರೈಸುವ ಸಾಧ್ಯತೆಯಿದೆ ಎಂದು ಹೇಳಿದರು.
ರಾಜ್ಯದಲ್ಲಿ ಈಗಾಗಲೇ ಹಲವು ಪೊಲೀಸ್ ಠಾಣೆಗಳನ್ನು ನಿರ್ಮಾಣ ಮಾಡಲಾಗಿದೆ. 10 ಸಾವಿರ ಮನೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಅದರಲ್ಲಿ 2 ಸಾವಿರ ಮನೆಗಳ ನಿರ್ಮಾಣ ಕಾರ್ಯ ಮುಂದುವರೆದಿದೆ. ಈ ವರ್ಷ 116 ಪೆÇಲೀಸ್ ಠಾಣೆಗಳು ನಿರ್ಮಾಣ ಹಂತದಲ್ಲಿದೆ ಸೂದ್ ತಿಳಿಸಿದರು.
ಇನ್ಸ್ ಪೆಕ್ಟರ್ ನಂದೀಶ್ ಸಾವು ಪ್ರಕರಣ ಸಂಬಂಧ ರವಿವರ ಸಿಎಂ ಸೂಚನೆ ಕೊಟ್ಟಿದ್ದಾರೆ. ಅದರಂತೆ ನಾವು ತನಿಖೆ ಮಾಡುತ್ತಿದ್ದೇವೆ. ಇಲಾಖಾ ಮಟ್ಟದಲ್ಲಿ ತನಿಖೆ ಮಾಡಲು ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.