‘ತೀರ್ಥಯಾತ್ರೆ’ ಹೆಸರಿನಲ್ಲಿ ದುಂದುವೆಚ್ಚ ನಿಲ್ಲಿಸಿ: ಕವಿರಾಜ್
ಬೆಂಗಳೂರು, ಜ.12: ತೀರ್ಥಯಾತ್ರೆ ಎನ್ನುವುದು ನಮ್ಮ ಸಂಸ್ಕೃತಿಯಲ್ಲ. ಹೀಗಾಗಿ, ಇದರ ಹೆಸರಿನಲ್ಲಿ ದುಂದು ವೆಚ್ಚ ನಿಲ್ಲಿಸಿ ಎಂದು ಚಿತ್ರ ಸಾಹಿತಿ ಕವಿರಾಜ್ ತಿಳಿಸಿದ್ದಾರೆ.
ಗುರುವಾರ ನಗರದ ಅರಮನೆ ರಸ್ತೆಯಲ್ಲಿರುವ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ರಾಷ್ಟ್ರೀಯ ದ್ರಾವಿಡ ಸಂಘ(ಆರ್ಡಿಎಸ್) ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ನಮ್ಮ ಮೂಲ ದ್ರಾವಿಡ ಸಂಸ್ಕೃತಿಯನ್ನೆ ಮರೆಮಾಚಲಾಗುತ್ತಿದೆ. ಇತ್ತೀಚಿನ ಮದುವೆಗಳನ್ನು ನೋಡಿದರೆ, ನಮ್ಮ ಕಾರ್ಯಕ್ರಮಗಳೇ ಇಲ್ಲದಂತೆ ಕಣ್ಮರೆಯಾಗಿದೆ. ಅದರಲ್ಲೂ ತೀರ್ಥಯಾತ್ರೆ ಹೋಗುವ ಹೊಸ ಯೋಜನೆ ಚಾಲ್ತಿಯಾಗಿದೆ. ಆದರೆ, ಇದು ನಮ್ಮ ಸಂಸ್ಕೃತಿಯೇ ಅಲ್ಲ. ಅದಕ್ಕಾಗಿ ಹಣ ಖರ್ಚು ಮಾಡಿ, ಮೌಢ್ಯತೆಗೆ ಬಲಿಯಾಗುವುದು ಬೇಡ ಎಂದರು.
ಉತ್ತರ ಭಾರತೀಯರು ನಮ್ಮ ಎಲ್ಲ ಕ್ಷೇತ್ರಗಳಿಗೂ ಲಗ್ಗೆ ಇಟ್ಟಿದ್ದಾರೆ. ಅವರ ಸಂಸ್ಕೃತಿಯನ್ನೇ ನಮ್ಮ ಮೇಲೆ ಹೇರಲಾಗುತ್ತಿದೆ. ಭಾಷೆಯನ್ನೂ ನಮಗೆ ಕಲಿಸಿಕೊಡಲಾಗುತ್ತಿದೆ. ಇದಕ್ಕೆ ನಾವು ಪ್ರತಿರೋಧ ವ್ಯಕ್ತಪಡಿಸದಿದ್ದರೆ, ದಕ್ಷಿಣ ಭಾರತೀಯರ ಸಂಸ್ಕೃತಿಯೇ ಕಾಣದಂತೆ ಹೋಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.