ದ್ವೇಷ ಹೋಗಲಾಡಿಸಲು 'ರಾಷ್ಟ್ರೀಯ ದ್ರಾವಿಡ ಸಂಘ: ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್
ರಾಷ್ಟ್ರೀಯ ದ್ರಾವಿಡ ಸಂಘ (RDS) ಉದ್ಘಾಟನೆ
ಬೆಂಗಳೂರು, ಜ. 12: 'ಸಮಾಜದಲ್ಲಿ ಕಂಡುಬರುತ್ತಿರುವ ಅಸಮಾನತೆ, ಮೌಢ್ಯಗಳ ವಿರುದ್ಧ ವೈಚಾರಿಕ ಹಾಗೂ ವಿಜ್ಞಾನದ ಬಾಂಬ್ಗಳನ್ನು ಹಾಕುವೆ' ಎಂದು ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್ ತಿಳಿಸಿದ್ದಾರೆ.
ಗುರುವಾರ ನಗರದ ಅರಮನೆ ರಸ್ತೆಯಲ್ಲಿರುವ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ರಾಷ್ಟ್ರೀಯ ದ್ರಾವಿಡ ಸಂಘ(ಆರ್ಡಿಎಸ್) ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸಮಾಜದ ವಾತಾವರಣವೇ ಕುಲುಷಿತಗೊಂಡಿದೆ. ಜಾತಿ, ಧರ್ಮಗಳ ನಡುವಿನ ದ್ವೇಷ ದ್ವಿಗುಣಗೊಂಡಿದೆ. ಇಂತಹ ಸಂದರ್ಭದಲ್ಲಿ ಆರ್ಡಿಎಸ್ ಸಂಘಟನೆ ಅವಶ್ಯವಾಗಿದೆ.ಆದರೆ, ಕೆಲವರು ಇದನ್ನು ‘ಆರ್ಡಿಎಕ್ಸ್’ ಎಂದು ವ್ಯಂಗ್ಯವಾಡುತ್ತಾರೆ. ನಾವು ಇದನ್ನು ಆರ್ಡಿಎಕ್ಸ್ ಎಂದೇ ಬಳಸಿ, ವೈಜ್ಞಾನಿಕ ಹಾಗೂ ವಿಜ್ಞಾನದ ಬಾಂಬ್ಗಳನ್ನು ಹಾಕುತ್ತೇವೆ ಎಂದು ಹೇಳಿದರು.
ಆರ್ಡಿಎಸ್ ಸಂಘಟನೆಯ ಮುಖ್ಯ ಉದ್ದೇಶ ಯಾರನ್ನೊ ವಿರೋಧಿಸುವುದಲ್ಲ. ನಮ್ಮ ನೆಲದ ಸಂಸ್ಕೃತಿಯನ್ನು ಉಳಿಸುವುದು ಹಾಗೂ ಬೆಳೆಸುವುದಾಗಿದೆ. ಎಲ್ಲರೂ ಸಮಾನವಾಗಿ ಬದುಕಬೇಕು ಎನ್ನುವುದು ದ್ರಾವಿಡ ತತ್ವ ಸಿದ್ಧಾಂತವಾಗಿದೆ. ಈ ಸಿದ್ದಾಂತದಲ್ಲಿ ಮೇಲು-ಕೀಳುಗಳಿಲ್ಲ, ರಾಜ-ಸೇವಕನಿಲ್ಲ, ಎಲ್ಲರೂ ಪ್ರಜೆಗಳೇ ಆಗಿದ್ದು, ಎಲ್ಲರಿಗೂ ಮಾನ್ಯತೆ ನೀಡಬೇಕು. ಧರ್ಮ-ಜಾತಿ ಹೆಸರಿನಲ್ಲಿ ನಮ್ಮನ್ನು ಮಾನಸಿಕವಾಗಿ ದಿಕ್ಕು ತಪ್ಪಿಸಿ, ನಮ್ಮೊಳಗೆ ಅಸೂಯೆ, ದ್ವೇಷ ಬಿತ್ತಲಾಗುತ್ತಿದೆ. ನಾವು ಅದನ್ನು ತಡೆಯಬೇಕಿದೆ. ಹಾಗಾಗಿ ದ್ರಾವಿಡ ಸಂಘ ಹುಟ್ಟುಹಾಕುತ್ತಿದ್ದೇವೆ ಎಂದು ಅವರು ವಿವರಿಸಿದರು.
‘ನಾವೆಲ್ಲಾ ಹಿಂದೂ, ನಾವೆಲ್ಲ ಒಂದು’ ಎಂದು ಘೋಷಣೆ ಕೂಗುತ್ತಿದ್ದರೂ, ಸಮಾಜದಲ್ಲಿ ಅಸ್ಪೃಶ್ಯತೆ, ಜಾತಿ ತಾರತಮ್ಯ ಪಾಲಿಸುತ್ತಿದ್ದಾರೆ ಎಂದ ಅವರು, ದಕ್ಷಿಣ ಭಾರತೀಯರ ಪ್ರತಿಯೊಬ್ಬರ ಡಿಎನ್ಎ ಪರಿಶೀಲನೆ ನಡೆಸಿದರೆ, ಒಂದೇ ಮಾದರಿಯಲ್ಲಿರುತ್ತದೆ. ಇದನ್ನು ಹೇಳದೆ, ರಹಸ್ಯವಾಗಿ ಇಡಲಾಗುತ್ತಿದೆ ಎಂದು ನುಡಿದರು.
ಲೇಖಕ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ಹಿಂದೆ ನಮ್ಮ ನೆಲದಲ್ಲಿ ಎಲ್ಲರನ್ನು ಒಳಗೊಳ್ಳುವ ಸಂಸ್ಕೃತಿ ಇತ್ತು. ಜಾತಿ, ಮತ, ಲಿಂಗ ತಾರತಮ್ಯ ಇರಲಿಲ್ಲ. ಎಲ್ಲರೂ ಎಲ್ಲರಿಗೋಸ್ಕರ ಬದುಕುತ್ತಿದ್ದರು. ಆದರೆ, ಸದ್ಯ ದೇಶದಲ್ಲಿ ಹಿಂದುತ್ವ ಹೆಸರಲ್ಲಿ ದುರಂತ ನಡೆಯುತ್ತಿದೆ. ಇದರ ವಿರುದ್ಧ ಮಾತನಾಡಿದರೆ, ಭಯೋತ್ಪದಕರು ಎನ್ನುವ ಪಟ್ಟ ಕಟ್ಟುತ್ತಾರೆ. ಆದರೆ, ನಾವು ಹೋರಾಟ ಮುಂದುವರೆಸಲು ಭಯೋತ್ಪದಕರು ಎಂದರೂ ಹಿಂದೆ ಹೆಜ್ಜೆ ಹಾಕಬಾರದು ಎಂದು ನುಡಿದರು.
ಚಿಂತಕ ಮುಕುಂದರಾಜ್ ಮಾತನಾಡಿ, ದ್ರಾವಿಡ ಪರಿಕಲ್ಪನೆ ಜನರಿಗೆ ತಲುಪದಂತೆ ನೋಡಿಕೊಳ್ಳಲಾಗುತ್ತಿದೆ. ಅದರಲ್ಲೂ ಮುಸ್ಲಿಮರ ವಿಷಯವನ್ನೆ ಪದೇ ಪದೇ ಪ್ರಸ್ತಾಪಿಸಿ, ಗೋಡ್ಸೆ ಸಂತತಿಗಳನ್ನು ಖುಷಿಪಡಿಸಲಾಗುತ್ತಿದೆ. ಇಂತಹ ವಿಷಯಗಳು ಬಂದಾಗ ನಾವು ಎಚ್ಚರವಾಗುವ ಜೊತೆಗೆ, ವೈಜ್ಞಾನಿಕವಾಗಿ ಉತ್ತರಗಳನ್ನು ನೀಡಬೇಕಾಗಿದೆ ಎಂದರು.
ದಲಿತ, ಮೈನಾರಿಟಿಸ್ ಸೇನೆಯ ಅಧ್ಯಕ್ಷ ಎ.ಜೆ.ಖಾನ್ ಮಾತನಾಡಿ, ಧರ್ಮದ ಹೆಸರಿನಲ್ಲಿ ಅಧರ್ಮವಿದ್ದು, ದ್ವೇಷ ಬಿತ್ತಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಯುವ ಜನತೆಯನ್ನು ಜಾಗೃತಗೊಳಿಸಲು ಎಲ್ಲ ರೀತಿಯ ಪ್ರಭುತ್ವವನ್ನು ಒಂದೆಡೆ ತರಲು ಸಂಘ ಆರಂಭವಾಗಿರುವುದು ಸ್ವಾಗತಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್, ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಜಿ.ಬಿ.ಪಾಟೀಲ್, ಕ್ರಿಕೆಟ್ ಪಟು ವೇದಾ ಕೃಷ್ಣಮೂರ್ತಿ, ಚಿತ್ರ ಸಾಹಿತಿ ಕವಿರಾಜ್, ಚಿಂತಕಿ ರೇಣುಕಾ ಸೇರಿದಂತೆ ಪ್ರಮುಖರಿದ್ದರು.
ಬ್ರಾಹ್ಮಣರ ಶಿಕ್ಷಣ ಸಂಸ್ಥೆಗಳಲ್ಲಿ ಡ್ರಗ್ಸ್ ಏಕಿಲ್ಲ?: ಬಡವರು ವಾಸ ಮಾಡುವ ಕಡೆ ಮಾದಕ ವಸ್ತಗಳು ವಾಹಿವಾಟು ಹೆಚ್ಚಾಗಿದೆ. ಅದರಲ್ಲೂ ಅಲ್ಪಸಂಖ್ಯಾತರ, ದಲಿತ, ಹಿಂದುಳಿದ ವರ್ಗಗಳ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯಲ್ಲಿಯೂ ಮಾದಕ ವಸ್ತುಗಳು ಹೆಚ್ಚಾಗಿ ದೊರೆಯುತ್ತಿದೆ. ಆದರೆ, ಬ್ರಾಹ್ಮಣ ಶಿಕ್ಷಣ ಸಂಸ್ಥೆಗಳ ಬಳಿ ಏಕೆ ಕಾಣುತ್ತಿಲ್ಲ. ಇದನ್ನು ಪ್ರತಿಯೊಬ್ಬರು ಅಳವಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ಅಗ್ನಿ ಶ್ರೀಧರ್ ತಿಳಿಸಿದರು.