ಬೆಂಗಳೂರು: ಅಪಹರಣಕ್ಕೊಳಗಾಗಿದ್ದ ಯುವಕನನ್ನು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಪೊಲೀಸರು
ಬೆಂಗಳೂರು, ಜ.12: ಯುವಕನ ಅಪಹರಣ ಪ್ರಕರಣ ಸಂಬಂಧ ಓರ್ವನನ್ನು ಇಲ್ಲಿನ ಆಡುಗೋಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಇನ್ನೂ, ಪ್ರಕರಣದಲ್ಲಿ ಭಾಗಿಯಾಗಿ ಪರಾರಿಯಾಗಿರುವ ಮೂವರು ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ. ಅಪಹರಣಕ್ಕೊಳಗಾದ ತೌಹೀದ್ ನನ್ನು ಪೊಲೀಸರು ರಕ್ಷಿಸಿದ್ದಾರೆ ಎಂದು ಡಿಸಿಪಿ ಸಿಕೆ ಬಾಬಾ ತಿಳಿಸಿದ್ದಾರೆ.
ಇನ್ಸ್ ಪೆಕ್ಟರ್ ಮಂಜುನಾಥ್ ರಾತ್ರಿ ಪಾಳಿಯಲ್ಲಿ ಕೋರಮಂಗಲದ 100 ಅಡಿ ರಸ್ತೆಯ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ರಾತ್ರಿ 11.40 ರ ಸುಮಾರಿಗೆ ವೇಗವಾಗಿ ಬಂದ ಕಾರೊಂದು ಬ್ಯಾರಿಕೇಡ್ಗೆ ಗುದ್ದಿದೆ. ಚಾಲಕ ವೇಗವಾಗಿ ಕಾರು ಚಲಾಯಿಸಿಕೊಂಡು ಪರಾರಿಯಾಗಲು ಯತ್ನಿಸಿದಾಗ ಕಾರಿನಲ್ಲಿದ್ದ ತೌಹಿದ್ ರಕ್ಷಣೆಗೆ ಕೂಗಿದ್ದಾನೆ.
ಅಪಹರಣವಾಗಿರುವ ಮುನ್ಸೂಚನೆ ಅರಿತ ಇನ್ಸ್ ಪೆಕ್ಟರ್ ಆರೋಪಿಗಳ ಕಾರನ್ನು ಹಿಡಿದಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ನಾಲ್ವರು ಆರೋಪಿಗಳಲ್ಲಿ ಮೂವರು ಪರಾರಿಯಾಗಿದ್ದು, ಗೋಪಿ ಎಂಬಾತ ಸಿಕ್ಕಿಬಿದ್ದಿದ್ದಾನೆ ಎಂದು ಡಿಸಿಪಿ ಹೇಳಿದ್ದಾರೆ.
Next Story