ಬಿಜೆಪಿ ಶಾಸಕ ತಿಪ್ಪಾರೆಡ್ಡಿಗೆ 90 ಲಕ್ಷ ರೂ.ಕಮಿಷನ್ ಕೊಟ್ಟಿದ್ದೇನೆ: ಮಂಜುನಾಥ್ ಆರೋಪ
‘ಕಮಿಷನ್ ಆಡಿಯೊ’ ಬಿಡುಗಡೆಗೊಳಿಸಿದ ಗುತ್ತಿಗೆದಾರರು
ಬೆಂಗಳೂರು, ಜ.16: ರಾಜ್ಯ ಸರಕಾರದಲ್ಲಿ ಪ್ರತಿ ಗುತ್ತಿಗೆ ಕಾಮಗಾರಿಗೆ ಕಮಿಷನ್ ನೀಡಬೇಕಾದ ಪರಿಸ್ಥಿತಿ ಇದೆ. ಅದರಲ್ಲೂ ಚಿತ್ರದುರ್ಗ ಬಿಜೆಪಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರು ಕೈಬೆರಳುಗಳಲ್ಲಿಯೇ ಕಮಿಷನ್ ಕೇಳುತ್ತಾರೆ ಎಂದು ಆರೋಪಿಸಿರುವ ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಆರ್.ಮಂಜುನಾಥ್, ಈ ಸಂಬಂಧ ಆಡಿಯೊವೊಂದನ್ನು ಬಿಡುಗಡೆ ಮಾಡಿದ್ದಾರೆ.
ಸೋಮವಾರ ನಗರದ ಚಾಮರಾಜಪೇಟೆಯ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚಿತ್ರದುರ್ಗದ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಅವರೇ ಕಮಿಷನ್ ದಂಧೆ ನಡೆಸುತ್ತಿದ್ದಾರೆಂದು ಆರೋಪಿಸಿದ್ದಾರೆ. ಅದು ಅಲ್ಲದೆ, ಕೈ ಬೆರಳುಗಳ ಮೂಲಕ ನೇರವಾಗಿ ಅವರು ಕಮಿಷನ್ ಕೇಳಿದ್ದಾರೆ. ಶಾಸಕರು ಕಮಿಷನ್ ಕೇಳಿರುವ ಬಗ್ಗೆ ಎಲ್ಲ ದಾಖಲೆಗಳು ನನ್ನ ಬಳಿಯಿದ್ದು, 2019ರಿಂದ ಇಲ್ಲಿಯ ವರೆಗೆ ನಾನೊಬ್ಬನೇ ಅವರಿಗೆ 90 ಲಕ್ಷ ರೂ.ಕಮಿಷನ್ ಕೊಟ್ಟಿದ್ದೇನೆ ಎಂದು ಆರೋಪಿಸಿದರು.
ತಿಪ್ಪಾರೆಡ್ಡಿ ಕ್ಷೇತ್ರದಲ್ಲಿ ಸುಮಾರು 700ರಿಂದ 800 ಕೋಟಿ ರೂ.ಕಾಮಗಾರಿ ನಡೆದಿದೆ ಎಂದ ಅವರು, ಮೊದಲ ಕೋವಿಡ್ ಸಮಯದಲ್ಲಿ ತಿಪ್ಪಾರೆಡ್ಡಿ ಅವರು, ಶೇ.10ರಷ್ಟು ಕಮಿಷನ್ ಪಡೆದಿದ್ದಾರೆ. ಎರಡನೆ ಕೋವಿಡ್ ಅಲೆಯ
ಲ್ಲೂ ಶೇ.10ರಷ್ಟು ಕಮಿಷನ್ ಪಡೆದುಕೊಂಡಿದ್ದಾರೆ. ಮೆಡಿಕಲ್ ಗ್ಯಾಸ್ ಕೊಠಡಿ ನಿರ್ಮಾಣಕ್ಕೆ 4 ಲಕ್ಷ ರೂ., ಲೇಔಟ್ ನಿರ್ಮಾಣಕ್ಕೆ 4 ಲಕ್ಷ ರೂ., ಲೇಔಟ್ ಅನುಮತಿಗಾಗಿ 18 ಲಕ್ಷ ರೂ., ಆಸ್ಪತ್ರೆ ದುರಸ್ಥಿಗೆ 12.5 ಲಕ್ಷ ರೂ. ಹೀಗೆ, 2019ರಿಂದ ಇಲ್ಲಿಯ ವರೆಗೂ 90 ಲಕ್ಷ ರೂ.ಗಳನ್ನು ಕಮಿಷನ್ ಹಣದ ರೂಪದಲ್ಲಿ ತಿಪ್ಪಾರೆಡ್ಡಿ ಅವರಿಗೆ ನೀಡಲಾಗಿದೆ ಎಂದು ಮಂಜುನಾಥ್ ಆಪಾದಿಸಿದರು.
ರಾಜ್ಯ ಸರಕಾರದಲ್ಲಿ ಕಮಿಷನ್ ಇರುವುದು ಸತ್ಯ. 4 ಮಂದಿ ಸಚಿವರು ಹಾಗೂ 13 ರಿಂದ 14 ಮಂದಿ ಶಾಸಕರು ಕಮಿಷನ್ ಪಡೆದಿರುವ ದಾಖಲೆಗಳು ನಮ್ಮಲ್ಲಿ ಇವೆ. ಆದರೆ, ಅವರ ಹೆಸರುಗಳನ್ನು ಈಗ ಬಹಿರಂಗಪಡಿಸುವುದಿಲ್ಲ. ದಾಖಲೆ ಬಿಡುಗಡೆ ಮಾಡಿದರೆ ಗುತ್ತಿಗೆದಾರರ ಕುಟುಂಬಸ್ಥರಿಗೆ ತೊಂದರೆ ಆಗುತ್ತದೆ ಎಂದು ಅವರು ಹೇಳಿದರು.
ಲೋಕೋಪಯೋಗಿ ಇಲಾಖೆ ಕಟ್ಟಡ ನಿರ್ಮಿಸಿ ಮೂರು ವರ್ಷವಾದರೂ ಬಿಲ್ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ಸಚಿವ ಸಿ.ಸಿ.ಪಾಟೀಲ್ ಅವರನ್ನು ಕೇಳಿದರೆ ನೀತಿ ಪಾಠ ಮಾಡಿದರು. ಅಲ್ಲದೆ, ಮಾನನಷ್ಟ ಮೊಕದ್ದಮೆ ಹೂಡಿದರೂ ನಾನು ಎದುರಿಸುವುದಕ್ಕೆ ಸಿದ್ಧ ಎಂದು ಮಂಜುನಾಥ್ ಇದೇ ಸಂದರ್ಭದಲ್ಲಿ ಹೇಳಿದರು.
► ಆರ್.ಮಂಜುನಾಥ್ ಬಿಡುಗಡೆ ಮಾಡಿದ ಶಾಸಕ ತಿಪ್ಪಾರೆಡ್ಡಿ ಅವರಿಗೆ ಕೊಟ್ಟಿದ್ದಾರೆನ್ನಲಾದ ಕಮಿಷನ್ ವಿವರ:
ಪಿಡಬ್ಲ್ಯೂಡಿ ಕಾಮಗಾರಿ- 12.5 ಲಕ್ಷ ರೂ.
ಆಸ್ಪತ್ರೆ ಕಾಮಗಾರಿ-12.5 ಲಕ್ಷ ರೂ.
ಕೋವಿಡ್ ಮೊದಲ ಅಲೆ-10 ಲಕ್ಷ ರೂ.
ಕೋವಿಡ್ 2ನೆ ಅಲೆ-12 ಲಕ್ಷ ರೂ.
ಎಂಜಿಪಿಎಸ್-4 ಲಕ್ಷ ರೂ.
ಬಡಾವಣೆ ನಿರ್ಮಾಣ-4 ಲಕ್ಷ ರೂ.
ಬಡಾವಣೆಗೆ ಅನುಮತಿ-18 ಲಕ್ಷ ರೂ.