"ಕನ್ನಡದ ಬಣ್ಣಗಳು" ಚಿತ್ರಕಲಾ ಪ್ರದರ್ಶನಕ್ಕೆ ರಾಜ್ಯಪಾಲ ಗೆಹ್ಲೋಟ್ ಚಾಲನೆ
ಬೆಂಗಳೂರು, ಜ.17: ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಆರ್ಟ್ ಕ್ಯಾನ್ಸರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿರುವ "ಕನ್ನಡದ ಬಣ್ಣಗಳು" ಚಿತ್ರಕಲಾ ಪ್ರದರ್ಶನಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಂಗಳವಾರ ಚಾಲನೆ ನೀಡಿದ್ದಾರೆ.
ನಂತರ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಂತೆ ಚಿತ್ರಕಲೆಯಲ್ಲಿ ಪ್ರಾಚೀನ ಕಾಲದಿಂದ ಇಂದಿನವರೆಗೆ ವಿಶೇಷ ರೀತಿಯ ಏಕತೆಯ ದೃಷ್ಟಿ ಇದೆ. ಇಂದು ಭಾರತೀಯ ಚಿತ್ರಕಲೆ ಜನಪದ ಬದುಕಿನ ವಿಷಯಗಳನ್ನು ಕೈಗೆತ್ತಿಕೊಂಡು ಅವುಗಳಿಗೆ ಮೂರ್ತ ರೂಪ ನೀಡುತ್ತಿರುವುದು ಪ್ರಶಂಸನೀಯ ಎಂದು ತಿಳಿಸಿದರು.
ದೇಶದಲ್ಲಿ ಕಂಡುಬರುವ ಅವಶೇಷಗಳು ಮತ್ತು ಸಾಹಿತ್ಯಿಕ ಮೂಲಗಳ ಆಧಾರದ ಮೇಲೆ, ಭಾರತದಲ್ಲಿ ‘ಚಿತ್ರಕಲೆ' ಬಹಳ ಪ್ರಾಚೀನ ಕಾಲದಿಂದಲೂ ಪ್ರಚಲಿತದಲ್ಲಿದೆ. ಇತಿಹಾಸ ಪೂರ್ವ ಕಾಲದಲ್ಲಿ ಮಾನವರು ಗುಹೆಗಳ, ಗೋಡೆಗಳ ಮೇಲೆ ಚಿತ್ರಿಸಿದ ಉದಾಹರಣೆಗಳಿವೆ. 7 ನೆ ಶತಮಾನದಲ್ಲಿ ಅಜಂತಾ ಮತ್ತು ಎಲ್ಲೋರಾ ಗುಹೆಗಳ ವರ್ಣಚಿತ್ರಗಳು ಭಾರತೀಯ ಚಿತ್ರಕಲೆಯ ಅತ್ಯುತ್ತಮವಾಗಿದೆ ಎಂದು ಐತಿಹಾಸಿಕ ಚಿತ್ರಕಲೆಗಳನ್ನು ಮೆಲುಕು ಹಾಕಿದರು.
ಜನರ ಕಲಾತ್ಮಕ ಅಭಿವ್ಯಕ್ತಿ ಕೇವಲ ಕಾಗದ ಅಥವಾ ಹಲಗೆಯ ಮೇಲೆ ಚಿತ್ರಗಳನ್ನು ಮಾಡಲು ಸೀಮಿತವಾಗಿಲ್ಲ. ಮನೆಗಳ ಗೋಡೆಗಳ ಮೇಲೆ ಅಲಂಕಾರಿಕ ಕಲೆ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯ ದೃಶ್ಯವಾಗಿದೆ. ಹಬ್ಬಗಳಂತಹ ವಿವಿಧ ಸಂದರ್ಭಗಳಲ್ಲಿ, ವಿಸ್ತಾರವಾದ ಚಿತ್ರಕಲೆ ವಿನ್ಯಾಸಗಳನ್ನು ನೆಲದ ಮೇಲೆ ‘ರಂಗೋಲಿ' ರೂಪದಲ್ಲಿ ಮಾಡಲಾಗುತ್ತದೆ. ಯಾವುದೇ ನೈಜ ಅಥವಾ ಕಾಲ್ಪನಿಕ ವಸ್ತುವನ್ನು ಕಾಂಕ್ರೀಟ್ ರೂಪದಲ್ಲಿ ಪ್ರಸ್ತುತಪಡಿಸುವುದು ವರ್ಣಚಿತ್ರಕಾರನ ವಿಶೇಷತೆಯಾಗಿದೆ ಎಂದು ಹೇಳಿದರು.
ಈ ಪ್ರದರ್ಶನವು ನಮ್ಮ ಸಮುದಾಯದ ಪ್ರತಿಭಾವಂತ ಕಲಾವಿದರ ಕಲಾಕೃತಿಗಳನ್ನು ಮತ್ತು ಐತಿಹಾಸಿಕ ಪರಂಪರೆಯೊಂದಿಗೆ ಕರ್ನಾಟಕದ ಅಭಿವೃದ್ಧಿಯನ್ನು ಪ್ರದರ್ಶಿಸುತ್ತಿದೆ. ಪ್ರದರ್ಶನದಲ್ಲಿ ಕವಿ ಮತ್ತು ಸಮಾಜ ಸುಧಾರಕ ಸಂತ ಬಸವೇಶ್ವರ, ಪುರಂದರದಾಸರು, ಕೃಷ್ಣ ರಾಜ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ, ಕುವೆಂಪು, ನೃತ್ಯಗಾರ್ತಿ ವೆಂಕಟಲಕ್ಷ್ಮಮ್ಮ ಮತ್ತು ನಟ ರಾಜಕುಮಾರ್ ಅವರನ್ನು ಇಂದಿನ ಕಲಾವಿದರ ಸೃಜನಾತ್ಮಕ ವಿಧಾನದಲ್ಲಿ ಚಿತ್ರಿಸಲಾಗಿದೆ. ವರ್ಣಚಿತ್ರಗಳ ಮೂಲಕ ಕರ್ನಾಟಕದ ಇತಿಹಾಸಕ್ಕೆ ಕಲಾತ್ಮಕ ರೂಪ ನೀಡಲು ಎಂಟು ಮಹಿಳಾ ಕಲಾವಿದರು ಮಾಡಿದ ಪ್ರಯತ್ನ ಶ್ಲಾಘನೀಯ ಎಂದರು.
ಈ ಪ್ರದರ್ಶನದಿಂದ ಬರುವ ಆದಾಯದ ಒಂದು ಭಾಗವನ್ನು ಆರ್ಟ್ ಕ್ಯಾನ್ಸರ್ ಚಾರಿಟೇಬಲ್ ಟ್ರಸ್ಟ್ ಮೂಲಕ ಕ್ಯಾನ್ಸರ್ ತಡೆಗಟ್ಟುವಿಕೆಗೆ ಬಳಸಲಾಗುವುದು ಎಂದು ತಿಳಿಸಲಾಗಿದೆ. ಈ ಕಾರ್ಯಕ್ಕೆ ಟ್ರಸ್ಟ್ ಗೆ ಹಾಗೂ ಇತಿಹಾಸದ ಪುಟಗಳನ್ನು ಅತ್ಯಂತ ಸುಂದರವಾಗಿ ಪ್ರದರ್ಶಿಸಿದ ಕಲಾವಿದರಿಗೆ ಮತ್ತು ಅವರ ಗುರುಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಕಲಾ ಇತಿಹಾಸಕಾರ ಡಾ. ಚೂಡಾಮಣಿ ನಂದಗೋಪಾಲ್, ಎಬಿಎನ್ ಜೋಸೆಫ್, ಶಶಿಧರ್, ಅಮರೇಗೌಡ ಉಪಸ್ಥಿತರಿದ್ದರು.