ಎಚ್. ವಿಶ್ವನಾಥ್ ಕಾಂಗ್ರೆಸ್ ಸೇರ್ಪಡೆಗೆ ದಿನಾಂಕ ನಿಗದಿಯಾಗಿದೆ: ಡಿ.ಕೆ ಶಿವಕುಮಾರ್
ಬೆಂಗಳೂರು, ಜ.20: 'ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ಕಾಂಗ್ರೆಸ್ ಪಕ್ಷ ಸೇರುವುದಕ್ಕೆ ದಿನಾಂಕ ನಿಗದಿಯಾಗಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ನಾಯಕರು ಪಕ್ಷಕ್ಕೆ ಆಗಮಿಸುತ್ತಿದ್ದಾರೆ. ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪಕ್ಷ ಸೇರ್ಪಡೆಯಾಗಲು ದಿನಾಂಕ ನಿಗದಿಯಾಗಿದೆ. ಉಳಿದಂತೆ ಯಾರೆಲ್ಲಾ ಬರುತ್ತಾರೆ ಎಂದು ನಾನು ಈಗ ಹೇಳುವುದಿಲ್ಲ ಎಂದ ಅವರು, ಬಿಜೆಪಿ ಹಾಲಿ ಶಾಸಕರು ಬಹಳ ಜನ ನಮ್ಮನ್ನು ಸಂಪರ್ಕಿಸಿದ್ದಾರೆ. ಆದರೆ ಪಕ್ಷದಲ್ಲಿ ಅವರಿಗೆ ಸ್ಥಾನ ನೀಡಬೇಕಾಗುತ್ತದೆ. ಕೆಲವು ಕಡೆ ಅದು ಸಾಧ್ಯ ಆಗುವುದಿಲ್ಲ. ಯಾರೆಲ್ಲಾ ಬರಲಿದ್ದಾರೆಂದು ನಾನು ಇಂದು ಬಹಿರಂಗ ಪಡಿಸುವುದಿಲ್ಲ' ಎಂದು ಶಿವಕುಮಾರ್ ತಿಳಿಸಿದರು.
ಈಗಾಗಲೇ ಬಿಜೆಪಿ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ವಿಶ್ವನಾಥ್, 'ನನ್ನ ರಕ್ತನೇ ಕಾಂಗ್ರೆಸ್ , ನಾನು ಕಾಂಗ್ರೆಸ್ ಸೇರುವುದು ಖಚಿತ. ನಾನು ಯಾವುದೇ ಪಕ್ಷಕ್ಕೆ ಸೇರಿದವನಲ್ಲ. ನಾನು ಕಾಂಗ್ರೆಸ್ಗೆ ಬೆಂಬಲ ನೀಡುತ್ತೇನೆ. ನನ್ನ ಮನೆಗೆ ವಾಪಸ್ ಹೋಗೊಕೆ ಏನಿದೆ? ಯಾವುದೇ ಷರತ್ತುಗಳಿಲ್ಲ. ನಾನು ಪಕ್ಷ ಬಿಡುವಾಗ ತಿಳಿಸಿಯೇ ಹೋಗುತ್ತೇನೆ' ಎಂದು ಇತ್ತೀಚೆಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಸೇರಲು BJP ಶಾಸಕರು ಸಿದ್ಧರಿದ್ದಾರೆ, ಸ್ವಲ್ಪ ಕಾಲ ಕಾಯಿರಿ ಎಂದಿದ್ದೇನೆ: ಡಿ.ಕೆ.ಶಿವಕುಮಾರ್