ಬಜೆಟ್ನಲ್ಲಿ ಖಾದಿ, ಗ್ರಾಮೋದ್ಯೋಗಕ್ಕೆ ಒತ್ತು: ಮುಖ್ಯಮಂತ್ರಿ ಬೊಮ್ಮಾಯಿ ಭರವಸೆ
ಬೆಂಗಳೂರು, ನ.26: ಖಾದಿಗೆ ಉತ್ತಮ ಭವಿಷ್ಯವಿದ್ದು, ಯಾರು ಭಯ ಪಡುವ ಅವಶ್ಯಕತೆ ಇಲ್ಲ. ಈ ಬಾರಿಯ ಬಜೆಟ್ನಲ್ಲಿ ಖಾದಿ ಮತ್ತು ಗ್ರಾಮೋದ್ಯೋಗಕ್ಕೆ ವಿಶೇಷವಾದ ಒತ್ತು, ಹಣಕಾಸಿನ ನೆರವು ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಗುರುವಾರ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಖಾದಿ ಉತ್ಸವ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ಥಗಿತಗೊಂಡಿರುವ 24 ಕೋಟಿ ರೂ. ಖಾದಿ ಉದ್ಯಮದ ಪ್ರೋತ್ಸಾಹಧನಕ್ಕೆ ಕೂಡಲೇ ಅನುಮೋದನೆ ನೀಡಿ ಕೂಡಲೇ ಬಿಡುಗಡೆ ಮಾಡುವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಮಹಾತ್ಮ ಗಾಂಧೀಜಿ ಖಾದಿಗೆ ಮಹತ್ವ ಕೊಟ್ಟಿದ್ದರು. ಸ್ವರಾಜ್ಯದ ಪ್ರತೀಕಾರವಾಗಿ ವಿದೇಶಿ ವಸ್ತುಗಳನ್ನು ಬಹಿಷ್ಕಾರ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಸ್ವದೇಶಿ ವಸ್ತುಗಳ ಬಳಕೆ ಮಾಡುವ ವಿಚಾರದಲ್ಲಿ ಮೊಟ್ಟ ಮೊದಲ ಸ್ಪಂದಿಸಿ ಯಶಸ್ವಿಯಾಗಿ ಸಹಾಯ ಮಾಡಿದ್ದು, ಖಾದಿ ಗ್ರಾಮೋದ್ಯೋಗಿಗಳು, ನೇಕಾರರು. ದೊಡ್ಡ ಪ್ರಮಾಣದಲ್ಲಿ ಬಟ್ಟೆ ಉತ್ಪಾದನೆ ಮಾಡಿ ದೇಶಕ್ಕೆ ಕೊಟ್ಟಿದ್ದರು. ಬೃಹತ್ ಪ್ರಮಾಣದ ಕಾರ್ಖಾನೆಯಿಂದ ಉತ್ಪಾದನೆ ಆಗಬಾರದು. ಬೃಹತ್ ಪ್ರಮಾಣದ ಜನಸಂಖ್ಯೆಯಿಂದ ಉತ್ಪಾದನೆಯಾಗಿ ಎಲ್ಲರಿಗೂ ಉದ್ಯೋಗ ಸಿಗಬೇಕು ಎಂದು ಗಾಂಧಿಜೀ ಹೇಳಿದ್ದರು. ಇವತ್ತಿಗೂ ಕೃಷಿಯ ನಂತರ ಅತಿಹೆಚ್ಚು ಉದ್ಯೋಗ ನೀಡುತ್ತಿರುವುದು ಖಾದಿ ಗ್ರಾಮೋದ್ಯೋಗ ಕ್ಷೇತ್ರ ಎಂದು ಹೇಳಿದರು.
ಇವತ್ತು ತಂತ್ರಜ್ಞಾನ ಬದಲಾವಣೆ ಆಗಿದ್ದರಿಂದ ಖಾದಿಗೆ ಹಿನ್ನೆಡೆಯಾಗಿದೆ. ಪಾಲಿಸ್ಟರ್ ಬಟ್ಟೆಗಳ ಉಪಯೋಗ ಹೆಚ್ಚಾದಾಗ ಖಾದಿ ಉದ್ಯೋಗಕ್ಕೆ ಹೆಚ್ಚಿನ ತೊಂದರೆ ಆಗಿತ್ತು. ಆದರೆ ಈಗ ಸಾಕಷ್ಟು ಬದಲಾವಣೆಯಾಗಿದೆ. ಎತ್ನಿಕ್ ಉತ್ಪಾದನೆಗೆ ಹೆಚ್ಚು ಬೇಡಿಕೆ ಇದೆ ಎಂದರು.
ಖಾದಿ ಮತ್ತು ಗ್ರಾಮೋದ್ಯೋಗದಿಂದ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆ. ಖಾದಿ ಬಟ್ಟೆಗಳು, ಸಾವಯವ ಆಹಾರಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಅಮೆಜಾನ್ ಹಾಗೂ ಪ್ಲಿಪ್ ಕಾರ್ಟ್ ನಂತಹ ಸಂಸ್ಥೆಗಳು ಖಾದಿ ವಸ್ತುಗಳ ಖರೀದಿಗೆ ಆಸಕ್ತಿ ವಹಿಸಿವೆ. ನೇರವಾಗಿ ಉತ್ಪಾದಕರಿಂದ ಮಾರುಕಟ್ಟೆಗೆ ಕಳುಹಿಸುವ ವ್ಯವಸ್ಥೆ ಮಾಡುತ್ತಿದ್ದೇವೆ. ಆನ್ಲೈನ್ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿದ್ದೇವೆ ಎಂದು ತಿಳಿಸಿದರು.
ಸ್ತ್ರೀ ಸಾಮಥ್ರ್ಯ ಯೋಜನೆ ಮೂಲಕ ಮಹಿಳೆಯರಿಗೆ 5 ಲಕ್ಷದ ವರೆಗೂ ಧನ ಸಹಾಯ ಮಾಡಿ ಮಹಿಳಾ ಸಂಘಗಳ ಮೂಲಕ ಉತ್ಪಾದನೆಗೆ ಆದ್ಯತೆ ನೀಡಿದ್ದೇವೆ. ಯುವಕರಿಗೆ ಸಂಘಗಳ ಮೂಲಕ ಸ್ವಯಂ ಉದ್ಯೋಗಕ್ಕೆ ಅವಕಾಶ ಕಲ್ಪಿಸಿದ್ದೇವೆ. ಖಾದಿ ಗ್ರಾಮೋದ್ಯೋಗ ಕಾಲಕ್ಕೆ ತಕ್ಕಂತೆ ಡಿಸೈನ್ ಮಾಡಿ ಉತ್ಪಾದನೆ ಮಾಡಬೇಕು ಎಂದರು.
ಖಾದಿ ಮಂಡಳಿಯ ಅಧ್ಯಕ್ಷ ನಾಗರಾಜು ಮಾತನಾಡಿ, ಸರಕಾರ ಮುಂದಿನ ಬಜೆಟ್ನಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಕಾರ್ಮಿಕರ ಸಾಲವನ್ನು ಮನ್ನಾ ಮಾಡಬೇಕು ಎಂದ ಅವರು, ರಾಜ್ಯದಲ್ಲಿ 172 ಖಾದಿ ಸಂಸ್ಥೆಗಳಿದ್ದು, 20 ಸಾವಿರಕ್ಕೂ ಹೆಚ್ಚು ಜನರು ವೃತ್ತಿ ಮಾಡುತ್ತಿದ್ದಾರೆ. ಗ್ರಾಮಗಳಲ್ಲಿ ದುಡಿಯುವ ಕೈಗಳಿಗೆ ಕೊಡುವ ಕೆಲಸ ಇದಾಗಿದ್ದು, ಖಾದಿ ಸಂಸ್ಥೆಯಿಂದ ಒಂದು ಉತ್ತಮ ಬಣ್ಣ ಮತ್ತು ಗುಣಮಟ್ಟದ ವಸ್ತುಗಳು ಸಿದ್ಧವಾಗುತ್ತಿವೆ ಎಂದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಛಲವಾದಿ ನಾರಾಯಣಸ್ವಾಮಿ, ಖಾದಿ ಆಯೋಗದ ರಾಜ್ಯ ನಿರ್ದೇಶಕ ಮೋಹನ್ ರಾವ್ ಉಪಸ್ಥಿತರಿದ್ದರು.
''ಖಾದಿ ಉತ್ತೇಜಿಸಲು ಆರ್ಥಿಕ ಬಲಕ್ಕೆ ಕ್ರಮ''
ಖಾದಿ ಗ್ರಾಮೋದ್ಯೋಗ ಸಂಸ್ಥೆಯ ಆರ್ಥಿಕ ಬಲಕ್ಕೆ ಎಲ್ಲ ಕ್ರಮ ನಾನು ತೆಗೆದುಕೊಳ್ಳುತ್ತೇನೆ. ಬಾಕಿ ಇರುವ 24 ಕೋಟಿ ರೂ.ಗೆ ಅನುಮೋದನೆ ಮತ್ತು ಬೇರೆ ಬೇರೆ ಕಡೆಯ ದೊಡ್ಡ ದೊಡ್ಡ ಆಸ್ತಿಯ ರಕ್ಷಣೆಗೆ 5 ಕೋಟಿ ರೂ. ಕೊಡುವಂತೆ ಮನವಿ ಮಾಡಿದ್ದಿರಿ. ಅದಕ್ಕೆ ಸಂಬಂಧಿಸಿದ ಎಲ್ಲ ಕ್ರಮವನ್ನು ಕೈಗೊಳ್ಳುತ್ತೇನೆ.
ಬಸವರಾಜ್ ಬೊಮ್ಮಾಯಿ, ಮುಖ್ಯಮಂತ್ರಿ