ರಸ್ತೆ ಮೇಲ್ಸೇತುವೆಗಳು ಸಂಚಾರ ದಟ್ಟಣೆಯನ್ನು ಪರಿಹರಿಸುವುದಿಲ್ಲ, ಜನರ ತೆರಿಗೆ ಹಣ ವ್ಯರ್ಥ: ಅಶಿಶ್ ವರ್ಮಾ
'ಸ್ಯಾಂಕಿ ಕೆರೆ ಮೇಲ್ಸೇತುವೆ ಯೋಜನೆ ಅವೈಜ್ಞಾನಿಕ'
ಬೆಂಗಳೂರು: ರಸ್ತೆ ಮೇಲ್ಸೇತುವೆಗಳು ನಗರದಲ್ಲಿ ಸಂಚಾರ ದಟ್ಟಣೆಯನ್ನು ಪರಿಹರಿಸುವುದಿಲ್ಲ, ಬದಲಾಗಿ ಸಂಚಾರ ದಟ್ಟಣೆಯನ್ನು ಮತ್ತೊಂದು ಕಡೆಗೆ ಸ್ಥಳಾಂತರಿಸುತ್ತವೆ ಎಂದು ಇಂಡಿಯನ್ ಇನ್ಸ್ಟಿಟ್ಯೂಷನ್ ಆಫ್ ಸೈನ್ಸ್ (ಐಐಎಸ್ಸಿ)ಯ ಪ್ರಾಧ್ಯಾಪಕ ಅಶಿಶ್ ವರ್ಮಾ ತಿಳಿಸಿದ್ದಾರೆ.
ಮಂಗಳವಾರ ಮಲ್ಲೇಶ್ವರಂನ ಕೆನರಾ ಯೂನಿಯನ್ ನಲ್ಲಿ ಸ್ಯಾಂಕಿ ಮೇಲ್ವೇತುವೆ ಯೋಜನೆ ಆಯೋಜಿಸಲಾಗಿದ್ದ ಸಾರ್ವಜನಿಕ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೇಲ್ಸೇತುವೆಗಳು ವಾಹನಗಳನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಮಿಸಲಾಗುತ್ತದೆ, ಜನರನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸುವುದಿಲ್ಲ. ಯಾವುದೇ ಒಂದು ಯೋಜನೆಯನ್ನು ಅನುಷ್ಠಾನ ಮಾಡಬೇಕಾದರೆ, ಅದರ ಪರಿಣಾಮವನ್ನೂ ಪರಿಶೀಲಿಸಬೇಕು ಎಂದರು.
ಸ್ಯಾಂಕಿ ಮೇಲ್ಸೇತುವೆ ಯೋಜನೆಯನ್ನು ಯಾವುದೇ ಸಾರ್ವಜನಿಕ ಚರ್ಚೆಗೆ ಅಳವಡಿಕೆ ಮಾಡದೆ, ಬಿಬಿಎಂಪಿ ಯೋಜನೆಗೆ ಸಂಬಂಧಿಸಿ, ಡಿಪಿಆರ್ ಅನ್ನು ಸಲ್ಲಿಸಿದೆ. ಮೇಲ್ಸೇತುವೆಯನ್ನು ನಿರ್ಮಾಣ ಮಾಡಿದರೆ ಸಂಚಾರ ದಟ್ಟಣೆ ನಿವಾರಣೆಯಾಗುವುದಿಲ್ಲ. ಬದಲಾಗಿ ಜನರ ತೆರಿಗೆ ಹಣ ವ್ಯರ್ಥವಾಗುತ್ತದೆ ಎಂದುಹೇಳಿದರು.