ಭೂಸ್ವಾಧೀನ ವಿರೋಧಿಸಿ ರೈತ ಮಹಿಳೆಯರಿಂದ BDA ವಿರುದ್ಧ ಪೊರಕೆ ಚಳವಳಿ
ಬೆಂಗಳೂರು, ಫೆ.6: ನಗರದ ಹೊರವಲಯದಲ್ಲಿ ಶಿವರಾಮ ಕಾರಂತ ಬಡಾವಣೆ ಅಭಿವೃದ್ಧಿಗಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಭೂಸ್ವಾಧೀನಪಡಿಸಿಕೊಳ್ಳುತ್ತಿದ್ದು, ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿ, 17 ಹಳ್ಳಿಗಳ ರೈತ ಮಹಿಳೆಯರು ಸೋಮವಾರ ಪೊರಕೆ ಚಳವಳಿ ನಡೆಸಿದ್ದಾರೆ.
ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಸಾವಿರಾರು ರೈತರು, ಮಹಿಳೆಯರು ಹಾಗೂ ಭೂಮಿ ಕಳೆದುಕೊಂಡವರು ರಾಮಗೊಂಡನಹಳ್ಳಿಯಿಂದ ಯಲಹಂಕದ ತಹಶೀಲ್ದಾರ್ ಕಚೇರಿವರೆಗೂ ಕಾಲ್ನಡಿಗೆ ಮೆರವಣಿಗೆ ನಡೆಸಿದರು.
ಬಿಡಿಎ ಬಡಾವಣೆ ಅಭಿವೃದ್ಧಿಗಾಗಿ 3,546 ಎಕರೆ ಕೃಷಿ ಭೂಮಿಯನ್ನು ಸ್ವಾಧೀನ ಮಾಡಲು ಗುರುತು ಮಾಡಿದೆ. ಆದರೆ 1894ರ ಭೂಸ್ವಾಧೀನ ಕಾಯ್ದೆಯಡಿ ಪರಿಹಾರ ನೀಡುತ್ತಿದೆ. ಇದು ಸುಪ್ರೀಂ ಕೋಟ್ ಆದೇಶದ ಉಲ್ಲಂಘನೆಯಾಗಿದೆ. ಅಲ್ಲದೆ, ವ್ಯವಸಾಯವನ್ನೇ ನಂಬಿರುವ ಕುಟುಂಬಗಳು ಭೂ ವಂಚಿತರಾಗುತ್ತವೆ. ಹಾಗಾಗಿ ಬೂಮಿ ಕಳೆದುಕೊಳ್ಳುವವರಿಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸ್ಥಳೀಯ ಬಿಜೆಪಿ ಶಾಸಕ ಮನಸ್ಸು ಮಾಡಿದರೆ ಸಮಸ್ಯೆ ಬಗೆಹರಿಸುವುದು ದೊಡ್ಡದಲ್ಲ. ಆದರೆ ಶಾಸಕರು ಯಾವುದೇ ಪ್ರಯತ್ನವನ್ನು ನಡೆಸುತ್ತಿಲ್ಲ. ಹಾಗಾಗಿ ರೈತರ ಜಮೀನಿಗೆ ಅಕ್ರಮವಾಗಿ ನುಗ್ಗಿರುವ ಬಿಡಿಎ ಎಂಬ ಕಸವನ್ನು ಗುಡಿಸಿ ಬಿಸಾಡಲು ಪೊರಕೆ ಚಳವಳಿ ಮಾಡಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.