'ನಮ್ಮ ಮೆಟ್ರೋ' ಹಳಿಯಲ್ಲಿ ಬಿರುಕು: ತಪ್ಪಿದ ಭಾರೀ ದುರಂತ
ತ್ವರಿತ ಕಾಮಗಾರಿಯಿಂದ ಆತಂಕ ದೂರ ಎಂದ ಅಧಿಕಾರಿಗಳು
ಬೆಂಗಳೂರು, ಫೆ.6: 'ನಮ್ಮ ಮೆಟ್ರೋ' ಹಳಿಯಲ್ಲಿ ಎಲೆಕ್ಟ್ರಿಕ್ ಲೈನ್ ಬಿರುಕು ಬಿಟ್ಟ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಮೆಜೆಸ್ಟಿಕ್-ಕೆಂಗೇರಿ ನೇರಳೆ ಮಾರ್ಗದ ಪಟ್ಟಣಗೆರೆ ಸ್ಟೇಷನ್ಗೆ ಕೂಗಳತೆ ದೂರದ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಮೆಟ್ರೋ ಪೈಲೆಟ್ ಹಾಗೂ ಸಿಬ್ಬಂದಿ ಇದನ್ನು ಗಮನಿಸಿದ್ದು ಟ್ರ್ಯಾಕ್ ಸೌಂಡ್, ಸ್ಪೀಡ್ನಲ್ಲಿ ಬದಲಾವಣೆಯಾಗಿತ್ತು ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಕೂಡಲೇ ಎಚ್ಚೆತ್ತುಕೊಂಡು ಟ್ರ್ಯಾಕ್ ದುರಸ್ತಿ ಮಾಡಲಾಗಿದೆ. ಕಾಮಗಾರಿ ನಡೆಯುತ್ತಿದ್ದಾಗ ಮತ್ತೊಂದು ಟ್ರ್ಯಾಕ್ನಲ್ಲಿ ರೈಲು ಓಡಾಟಕ್ಕೆ ಅನುವು ಮಾಡಿಕೊಡಲಾಗಿತ್ತು. ಸರಿಪಡಿಸಿದ ನಂತರ ಎರಡೂ ಹಳಿಯಲ್ಲಿ ಎಂದಿನಂತೆ ಸಂಚಾರ ಮುಂದುವರಿಸಲಾಗಿದೆ. ಸಾರ್ವಜನಿಕರ ಗಮನಕ್ಕೆ ತರದೇ ಬಿಎಂಆರ್ಸಿಎಲ್ ದುರಸ್ತಿ ಕೆಲಸ ಮಾಡಿ ಮುಗಿಸಿದೆ.
ಪಿಲ್ಲರ್ ದುರಂತದ ಕಹಿ ನೆನಪು:
ಜ.10 ರಂದು ಮೆಟ್ರೋ ರೈಲಿನ ನಿರ್ಮಾಣ ಹಂತದ ಕಬ್ಬಿಣದ ಪಿಲ್ಲರ್ ಕುಸಿದು ತಾಯಿ ಮತ್ತು ಮಗ ಸಾವನ್ನಪ್ಪಿದ್ದರು. ಹೆಣ್ಣೂರು ಕ್ರಾಸ್ ಸಮೀಪದ ಹೆಚ್ಬಿಆರ್ ಲೇಔಟ್ ರಿಂಗ್ ರೋಡ್ ಬಳಿ ತೆರಳುತ್ತಿದ್ದಾಗ ಪಿಲ್ಲರ್ ಕುಸಿದು ಬಿದ್ದು ಅನಾಹುತ ಜರುಗಿತ್ತು.
ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ ಸಂಬಂಧ 8 ಜನರ ಮೇಲೆ ಕೂಡಲೇ ಎಫ್ಐಆರ್ ದಾಖಲಿಸಲಾಗಿತ್ತು. ಪ್ರಭಾರಿ ಉಪ ಮುಖ್ಯ ಇಂಜಿನಿಯರ್, ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ಸೈಟ್ ಇಂಜಿನಿಯರ್ಗಳನ್ನು ಬಿಎಂಆರ್ಸಿಎಲ್ ಅಮಾನತು ಮಾಡಿತ್ತು. ಮೆಟ್ರೋ ರೈಲು ಕಾರ್ಪೊರೇಶನ್ ಲಿಮಿಟೆಡ್(ಬಿಎಂಆರ್ಸಿಎಲ್) ಪ್ರಕರಣದ ಸ್ವತಂತ್ರ ತನಿಖೆ ಮತ್ತು ವರದಿ ನೀಡಲು ಭಾರತೀಯ ವಿಜ್ಞಾನ ಸಂಸ್ಥೆಗೆ ಮನವಿ ಮಾಡಿತ್ತು.