ಬಿಬಿಎಂಪಿ ವ್ಯಾಪ್ತಿಯಲ್ಲಿ 108 'ನಮ್ಮ ಕ್ಲಿನಿಕ್' ಗಳಿಗೆ ಸಿಎಂ ಬೊಮ್ಮಾಯಿ ಚಾಲನೆ
ಬೆಂಗಳೂರು, ಫೆ.7: ನಮ್ಮ ಕ್ಲಿನಿಕ್ ಒಂದು ಕ್ರಾಂತಿಕಾರಿ ಹೆಜ್ಜೆ. ಇತ್ತೀಚಿನ ವರ್ಷಗಳಲ್ಲಿ ಆರೋಗ್ಯ ಸೇವೆಗಳಿಂದ ವಂಚಿತರಾದ ಜನಕ್ಕೆ ಈ ವ್ಯವಸ್ಥೆ ಪುನಃ ಪ್ರಾರಂಭಿಸಲು ಖಾಸಗಿ ವಲಯದ ದವಾಖಾನೆಗಳನ್ನು ಸರಕಾರವೆ ಕೈಗೆತ್ತಿಕೊಂಡು ಬಿಬಿಎಂಪಿ ವ್ಯಾಪ್ತಿಯಲ್ಲಿ 108 ನಮ್ಮ ಕ್ಲಿನಿಕ್ಗಳನ್ನು ಸ್ಥಾಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಂಗಳವಾರ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ರಾಣಿ ಅಬ್ಬಕ್ಕದೇವಿ ಆಟದ ಮೈದಾನದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 108 ನಮ್ಮ ಕ್ಲಿನಿಕ್ಗಳನ್ನು ಲೋಕಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಶಿಕ್ಷಣಕ್ಕೆ ಅತಿ ಹೆಚ್ಚಿನ ಮಹತ್ವ ನೀಡಲಾಗಿದೆ. ರಸ್ತೆಗಳ ನಿರ್ಮಾಣವಾಗಿದೆ. ಬಹಳಷ್ಟು ಅಭಿವೃದಿಯಾಗುತ್ತಿರುವುದನ್ನು ಬಿಂಬಿಸುವ ಮೂಲಕ ಬೆಂಗಳೂರು ಬ್ರಾಂಡ್ ಅನ್ನು ಹೆಚ್ಚಿಸುವ ಕೆಲಸ ಮಾಡಬೇಕೆಂದು ಕರೆ ನೀಡಿದ ಮುಖ್ಯಮಂತ್ರಿ, ಮೊದಲೆಲ್ಲಾ ಕೇವಲ ಸಮಾಲೋಚನೆ ನೀಡುವ ವೈದ್ಯರಿದ್ದರು. ಈಗ ಪ್ರಾಥಮಿಕ ಚಿಕಿತ್ಸೆ ಪಡೆದು ಗುಣಮುಖರಾಗುವ ಅವಕಾಶ ದೊರೆಯುತ್ತದೆ ಎಂದರು.
ಟೆಲಿಮೆಡಸಿನ್ ವ್ಯವಸ್ಥೆ: ಸಾಮಾನ್ಯವಾಗಿರುವ ನೆಗಡಿ, ಕೆಮ್ಮಿನ ಜೊತೆಗೆ ಬಿಪಿ, ಮಧುಮೇಹ ಮುಂತಾದ ಕಾಯಿಲೆಗಳ ತಪಾಸಣೆ ಹಾಗೂ ಪರೀಕ್ಷೆಯೂ ಆಗುತ್ತದೆ. ಔಷಧಿಯನ್ನೂ ಉಚಿತವಾಗಿ ನೀಡಲಾಗುತ್ತದೆ. ಟೆಲಿಮೆಡಸಿನ್ ವ್ಯವಸ್ಥೆಯೂ ಇದ್ದು, ಹೆಚ್ಚಿನ ಸಮಸ್ಯೆ ಇದ್ದರೆ, ಪರಿಣಿತರ ಜೊತೆಗೆ ಟೆಲಿಸಂವಾದ ಮಾಡಿ ಅಗತ್ಯ ಉಪಚಾರಗಳನ್ನು ನೀಡಲಾಗುವುದು. ಇದು ಸಾಮಾನ್ಯ ನಾಗರಿಕರ ಆರೋಗ್ಯ ಸೇವೆಯನ್ನು ಇನ್ನಷ್ಟು ಗಟ್ಟಿಗೊಳಿದೆ. ಕಳೆದ ಬಾರಿ ಬಜೆಟ್ ನಲ್ಲಿ ಹೇಳಿದ್ದು, ಈಗ ಸ್ಥಾಪನೆಯಾಗಿದೆ ಎಂದು ಅವರು ಹೇಳಿದರು.
ಸೂಕ್ಷ್ಮಾತಿಸೂಕ್ಷ್ಮ ಸರಕಾರ: ಆರೋಗ್ಯ ಇಲಾಖೆಯಲ್ಲಿ ಕಳೆದ ವರ್ಷವೇ ಬಹಳಷ್ಟು ಕಾರ್ಯಕ್ರಮಗಳಾಗಿವೆ. ನಮ್ಮದು ಸೂಕ್ಷ್ಮಾತಿಸೂಕ್ಷ್ಮ ಸರಕಾರ. ಡಯಾಲಿಸಿಸ್ ಸೈಕಲ್ ದಿನಕ್ಕೆ 30 ಸಾವಿರ ಇದ್ದುದನ್ನು 60 ಸಾವಿರಕ್ಕೆ ಏರಿಸಲಾಗಿದೆ. ಕೀಮೋಥೆರಪಿಯ ಸೈಕಲ್ ಗಳನ್ನು 30 ಸಾವಿರದಿಂದ 60 ಸಾವಿರಕ್ಕೆ ಹೆಚ್ಚಿಸಿ 12 ಹೊಸ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಹುಟ್ಟು ಕಿವುಡಿರಗೆ ಸುಮಾರು 500 ಕೋಟಿ ರೂ.ಗಳ ವೆಚ್ಚದಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಅಳವಡಿಸಲಾಗುತ್ತಿದೆ. 60 ವರ್ಷಕ್ಕೆ ಮೇಲ್ಪಟ್ಟವರ ಕಣ್ಣುಗಳ ತಪಾಸಣೆ ಮಾಡಿ ಕನ್ನಡಕ ನೀಡುವ ಯೋಜನೆ ಅನುಷ್ಠಾನಗೊಳಿಸಿದೆ. ಆಸಿಡ್ ದಾಳಿಗೊಳಗಾದವರಿಗೆ ಸಹಾಯಧನವನ್ನು ಪ್ರತಿ ತಿಂಗಳು ಮೂರರಿಂದ ಹತ್ತು ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಮಾನಸಿಕ ರೋಗವಿದ್ದವರಿಗೆ ಇಡೀ ರಾಜ್ಯದಲ್ಲಿ ನಿಮ್ಹಾನ್ಸ್ ಮೂಲಕ ವಿಶೇಷ ಚಿಕಿತ್ಸೆಗೆ ಕ್ರಮ, ನಮ್ಮ ಕ್ಲಿನಿಕ್, ನೂರು ಪಿಎಚ್ಸಿ ಕೇಂದ್ರಗಳನ್ನು ಸಿಎಚ್ಸಿ ಕೇಂದ್ರಗಳನ್ನಾಗಿ ಉನ್ನತೀಕರಣ, ಅಂಗಾಂಗ ಕಸಿಗಾಗಿಯೂ ಒತ್ತು ನಿಡಲಾಗಿದೆ. ಮಹಿಳೆಯರಿಗಾಗಿ ಆಯುಷ್ಮತಿ ವಿಶೇಷ ಕ್ಲಿನಿಕ್ ಸ್ಥಾಪಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಆರೋಗ್ಯದ ಯಾವುದೇ ಕ್ಷೇತ್ರವನ್ನೂ ಬಿಡದೆ ಅಭಿವೃದ್ಧಿಗೊಳಿಸಲಾಗಿದೆ. ಸೂಕ್ಷ್ಮ ವಿಚಾರಗಳಿಗೆ ಕೂಡಲೇ ಸ್ಪಂದಿಸುವ ಕೆಲಸ, ದೀರ್ಘವಾಗಿ ಆರೋಗ್ಯ ಸುಧಾರಣೆಯ ದೃಷ್ಟಿಯಿಂದ ಕೆಲಸ ಮಾಡಲಾಗುತ್ತಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು. ಈ ಸಂದರ್ಭದಲ್ಲಿ ಅಬಕಾರಿ ಸಚಿವ ಕೆ.ಗೋಪಾಲಯ್ಯ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ವಿಧಾನಪರಿಷತ್ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮಿನಾರಾಯಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.