ಬೆಂಗಳೂರಿನಲ್ಲಿ ‘ಅಮೆರಿಕ ವೀಸಾ ಕಚೇರಿ’ ತೆರೆಯುವ ಅಗತ್ಯವಿದೆ: ಸಿಎಂ ಬೊಮ್ಮಾಯಿ
ಬೆಂಗಳೂರು, ಫೆ. 14: ಬೆಂಗಳೂರಿನಲ್ಲಿ ಅಮೆರಿಕಾ ವೀಸಾ ಕಚೇರಿ ತೆರೆಯುವ ಅಗತ್ಯವಿದೆ. ವೀಸಾ ಕಚೇರಿ ಚೆನ್ನೈನಲ್ಲಿರುವುದರಿಂದ ಬೆಂಗಳೂರಿನಿಂದ ಅಮೇರಿಕಕ್ಕೆ ಪ್ರಯಾಣಿಸುವವರಿಗೆ ತೊಂದರೆಯಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮನ್ನು ಭೇಟಿಯಾದ ಭಾರತದಲ್ಲಿರುವ ಅಮೆರಿಕದ ರಾಯಭಾರಿ ಎಲಿಝೆಬೆತ್ ಜೋನ್ಸ್ ಹಾಗೂ ಚೆನ್ನೈನಲ್ಲಿರುವ ಕಾನ್ಸುಲ್ ಜನರಲ್ ಜೂಡಿತ್ ರೇವಿನ್ ಅವರಿಗೆ ಮುಖ್ಯಮಂತ್ರಿ ಈ ವಿಷಯ ತಿಳಿಸಿದರು.
ಪ್ರತಿನಿತ್ಯ ವಿದೇಶಿಗರು ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಜನ ಬೆಂಗಳೂರಿನಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸುವುದರಿಂದ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಬೆಂಗಳೂರಿನಲ್ಲಿ ವೀಸಾ ಕಚೇರಿಯನ್ನು ತೆರೆಯುವಂತೆ ಮುಖ್ಯಮಂತ್ರಿ ಆಗ್ರಹಿಸಿದರು.
ಬೆಂಗಳೂರಿನಲ್ಲಿರುವ ಅಮೇರಿಕದ ಸಂಸ್ಥೆಗಳಿಗೆ ಎಲ್ಲ ಅಗತ್ಯ ಸಹಕಾರವನ್ನು ರಾಜ್ಯ ಸರಕಾರ ಒದಗಿಸುತ್ತಿದ್ದು, ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಹಾಗೂ ಉದ್ದಿಮೆಗಳನ್ನು ಸ್ಥಾಪಿಸಲು ಅತ್ಯುತ್ತಮ ವಾತಾವರಣವಿದೆ. ಹಾಗಾಗಿ, ವಿದೇಶಿ ಬಂಡವಾಳ ಹೂಡಿಕೆ ರಾಜ್ಯದಲ್ಲಿ ಹೆಚ್ಚಾಗಿದೆ. ಬೆಂಗಳೂರು ಭವಿಷ್ಯದ ನಗರ. ಆದುದರಿಂದ, ಬೆಂಗಳೂರಿನಲ್ಲಿ ವೀಸಾ ಕಚೇರಿಯ ಅಗತ್ಯವಿದೆ ಎಂದು ಮುಖ್ಯಮಂತ್ರಿ ಮನವರಿಕೆ ಮಾಡಿಕೊಟ್ಟರು.
ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ, ಇನ್ವೆಸ್ಟ್ ಕರ್ನಾಟಕ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಮಟ್ಟದ ಸಮಾವೇಶ ಹಾಗೂ ವಿಚಾರಸಂಕಿರಣಗಳು ನಡೆಯುತ್ತಲೆ ಇರುತ್ತವೆ. ಅಂತರರಾಷ್ಟ್ರೀಯ ಗಣ್ಯರು ಇವುಗಳಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸುತ್ತಾರೆ ಎಂದು ಅವರು ಹೇಳಿದರು.
ಬೆಂಗಳೂರು ಸ್ಟಾರ್ಟ್ ಅಪ್ ಕ್ಯಾಪಿಟಲ್ ಆಗಿದ್ದು, ದೇಶದಲ್ಲಿಯೇ ಅತಿ ಹೆಚ್ಚಿನ ಯೂನಿಕಾರ್ನ್ ಗಳಿಗೆ ತವರು. ಇಲ್ಲಿ ಉದ್ಯೋಗಾವಕಾಶಗಳು ಹೇರಳವಾಗಿವೆ. ಏರೋಸ್ಪೇಸ್ ಹಾಗೂ ರಕ್ಷಣಾ ವಲಯದಲ್ಲಿಯೂ ಕರ್ನಾಟಕ ಮುಂಚೂಣಿಯಲ್ಲಿದ್ದು, ವಿಮಾನದ ಬಿಡಿಭಾಗಗಳ ಉತ್ಪಾದನೆಗೂ ಗುರಿಯನ್ನು ಹೊಂದಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಹೊಸದಿಲ್ಲಿಯಲ್ಲಿರುವ ಅಮೆರಿಕದ ರಾಯಭಾರಿ ಎಲಿಝೆಬೆತ್ ಜೋನ್ಸ್ ಮಾತನಾಡಿ, ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರಿಗೆ ಇದು ತಮ್ಮ ಮೊದಲ ಭೇಟಿಯಾಗಿದ್ದು, ಅಮೇರಿಕ-ಭಾರತದ ವಾಣಿಜ್ಯ ಸಹಭಾಗಿತ್ವವನ್ನು ಮುನ್ನಡೆಸುವಲ್ಲಿ ಕರ್ನಾಟಕ ಮಹತ್ವದ ಪಾತ್ರವಹಿಸುತ್ತದೆ ಎಂದರು.
ಇಲ್ಲಿ 650ಕ್ಕೂ ಹೆಚ್ಚು ಅಮೆರಿಕನ್ ಕಂಪೆನಿಗಳಿವೆ, ಇವುಗಳಿಂದ ಅಮೆರಿಕ ಮತ್ತು ಭಾರತದಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗುತ್ತಿವೆ. ಭಾರತ ಮತ್ತು ಅಮೆರಿಕಾದ ಆರ್ಥಿಕತೆಗಳು ಹಲವಾರು ರೀತಿಯಲ್ಲಿ ಬೆಸೆದುಕೊಂಡಿದೆ. ಅಮೆರಿಕ ಮತ್ತು ಕರ್ನಾಟಕದ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಉತ್ಸುಕರಾಗಿರುವುದಾಗಿ ತಿಳಿಸಿದ ಅವರು, ಆವಿμÁ್ಕರ ಕ್ರಮಾಂಕದಲ್ಲಿ ಮತ್ತೊಮ್ಮೆ ಮೊದಲ ಸ್ಥಾನ ಪಡೆದಿರುವುದಕ್ಕೆ ಮುಖ್ಯಮಂತ್ರಿಯನ್ನು ಅಭಿನಂದಿಸಿದರು.