ಅಳಿಯನ ಅಪಹರಣ ಪ್ರಕರಣ: ಕಾಂಗ್ರೆಸ್ ನಾಯಕಿ ದಿವ್ಯಾಪ್ರಭಾ ಚಿಲ್ತಡ್ಕ ವಿರುದ್ಧ FIR
ಬೆಂಗಳೂರು, ಫೆ.19: ಅಳಿಯನ ಅಪಹರಣ ಆರೋಪ ಪ್ರಕರಣಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕಿ, ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಾಪ್ರಭಾ ಚಿಲ್ತಡ್ಕ ವಿರುದ್ಧ ಇಲ್ಲಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಅಪಹರಣ ಮಾಡಿ, ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಅಳಿಯ ನವೀನ್ ಗೌಡ ನೀಡಿದ ದೂರಿನಂತೆ ದಿವ್ಯಾಪ್ರಭಾ, ಅವರ ಪುತ್ರಿ ಸ್ಪಂದನಾ, ಪತಿ ಪರಶುರಾಮ್ ಸೇರಿ ಆರು ಜನರ ಮೇಲೆ ಎಫ್.ಐ.ಆರ್. ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಿವ್ಯಾಪ್ರಭಾ ಅವರ ಪುತ್ರಿ ಸ್ಪಂದನಾರನ್ನು ಮದುವೆಯಾಗಿದ್ದ ನವೀನ್ ಗೌಡ, ಇತ್ತೀಚೆಗೆ ಕೌಟುಂಬಿಕ ಕಾರಣದಿಂದ ಸ್ಪಂದನಾರಿಂದ ದೂರವಾಗಿದ್ದರೆನ್ನಲಾಗಿದೆ. ಇದೇ ಕಾರಣಕ್ಕೆ ತನ್ನನ್ನು ಮನೆಯಿಂದ ಅಪಹರಣ ಮಾಡಿದ್ದಾರೆ. ನಂತರ ಜೆ.ಪಿ. ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಮಾನಸಿಕ ಅಸ್ವಸ್ಥನೆಂದು ಬಿಂಬಿಸಲು ಪ್ರಯತ್ನಪಟ್ಟಿದ್ದಾರೆ ಎಂದು ದೂರಿನಲ್ಲಿ ನವೀನ್ ಗೌಡ ಉಲ್ಲೇಖ ಮಾಡಿದ್ದರು.
ಈ ಸಂಬಂಧ ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.