ಬೆಂಗಳೂರು: ಪತ್ನಿಯ ಕೊಲೆಗೈದು, ಮಗುವಿಗೂ ಚಾಕು ಇರಿದ ವ್ಯಕ್ತಿ
ಬೆಂಗಳೂರು, ಮಾ.21: ಪತ್ನಿಯ ಕತ್ತು ಕೊಯ್ದು ಕೊಲೆ ಮಾಡಿರುವ ವ್ಯಕ್ತಿ,ಆಕೆಯ ಮಗುವನ್ನೂ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸುಹೈಲ್ ಎಂಬಾತ ತನ್ನ ಪತ್ನಿ ಟಿ.ಬೇಬಿ (32) ಎಂಬಾಕೆಯನ್ನು ಕೊಲೆಗೈದಿದ್ದಾನೆ.ಬಳಿಕ ಆಕೆಯ ಮಗು ನಯೀಂ ಎಡ ಕಾಲಿಗೂ ಚಾಕು ಇರಿದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಕೊಲ್ಕತ್ತಾ ಮೂಲದ ಸುಹೈಲ್ ಮತ್ತು ಟಿ.ಬೇಬಿಗೆ 14 ವರ್ಷಗಳ ಹಿಂದೆ ವಿವಾಹವಾಗಿತ್ತು. 2013ರಲ್ಲಿ ಬೆಂಗಳೂರಿಗೆ ಬಂದಿದ್ದ ದಂಪತಿ ಕೆ.ಜಿಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದರು. ಪತ್ನಿಗೆ ಸೈಯ್ಯದ್ ನದೀಮ್ ಎಂಬಾತನ ಜತೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿದ ಸುಹೈಲ್, ಪತ್ನಿಯನ್ನು ವಾಪಸ್ ಕೊಲ್ಕತ್ತಾಗೆ ಕರೆದೊಯ್ದಿದ್ದ. ಆದರೆ ಎರಡು ವರ್ಷಗಳ ಹಿಂದೆ ಟಿ.ಬೇಬಿ ಪತಿಯನ್ನು ಬಿಟ್ಟು ಬೆಂಗಳೂರಿಗೆ ಬಂದು ಸೈಯದ್ ನದೀಮ್ನೊಂದಿಗೆ ವಾಸಿಸಲಾರಂಭಿಸಿದ್ದಳು ಎನ್ನಲಾಗಿದೆ.
ಇಬ್ಬರಿಗೂ ಒಂದು ಮಗು ಸಹ ಜನಿಸಿತ್ತು. ಈ ವಿಚಾರ ತಿಳಿದು ಬೆಂಗಳೂರಿಗೆ ಬಂದಿದ್ದ ಆರೋಪಿ, ಸೋಮವಾರ ರಾತ್ರಿ ಪತ್ನಿ ವಾಸವಿದ್ದ ಕೆ.ಜಿ.ಹಳ್ಳಿಯ ಮನೆಗೆ ಬಂದಿದ್ದ. ನದೀಮ್ನಿಂದ ಮಗುವಾಗಿದ್ದ ಬಗ್ಗೆ ಇಬ್ಬರ ನಡುವೆ ಗಲಾಟೆ ಆರಂಭವಾಗಿತ್ತು. ಮದ್ಯದ ಅಮಲಿನಲ್ಲಿದ್ದ ಆರೋಪಿ ಏಕಾಏಕಿ ಟಿ.ಬೇಬಿಯ ಕತ್ತು ಕೊಯ್ದು ಕೊಲೆಗೈದು ಬಳಿಕ ಮಗುವಿನ ಕಾಲಿಗೆ ಚಾಕು ಇರಿದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹೆಣ್ಣೂರು ಠಾಣಾ ಪೊಲೀಸರು ಆರೋಪಿನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ ಎಂದು ಪೂರ್ವವಿಭಾಗದ ಡಿಸಿಪಿ ಭೀಮಾಶಂಕರ ಗುಳೇದ್ಮಾಹಿತಿ ನೀಡಿದರು.