ತ್ರಿಭಾಷಾ ಕವಿ ಪಂಪನಿಗೆ ಸಿಗಬೇಕಾದ ಸ್ಥಾನಮಾನ ಇನ್ನೂ ದೊರೆತಿಲ್ಲ: ಹಂಪ ನಾಗರಾಜಯ್ಯ
ಬೆಂಗಳೂರು, ಮಾ. 25: ಪಂಪ ತ್ರಿಭಾಷಾ ಕವಿ ಎಂದೇ ಪ್ರಸಿದ್ಧಿ ಪಡೆದ ಪಂಪನಿಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಸಿಗಬೇಕಾದ ಸ್ಥಾನಮಾನ ದೊರೆತ್ತಿಲ್ಲ. ಇದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ ಎಂದು ಸಾಹಿತಿ ಹಂಪ ನಾಗರಾಜಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದ ಜೈನ ಭವನದಲ್ಲಿ ಕಮಲಾ ಹಂಪನಾ ಸಾಹಿತ್ಯ ವೇದಿಕೆ ಮತ್ತು ಕರ್ನಾಟಕ ಜೈನ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ‘ಅಕ್ಕರಗೊಟ್ಟಿಯ ಅಲಂಪಿನ ಇಂಪು ಚಂಪೂ ಕಬ್ಬಗಳ ಹಬ್ಬ’ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದವರು.
ಪಂಪ ಹಾಗೂ ಆತನ ತಮ್ಮ ಜಿನವಲ್ಲಭನ ಬಗ್ಗೆ ತಿಳಿದುಕೊಳ್ಳುದು ಬಹಳ ಇದೆ. ಪಂಪನ ದಕ್ಷಿಣಾತ್ಯ ಮಹಾಭಾರತದ ಪರಂಪರೆಯನ್ನು ತಿಳಿದುಕೊಂಡು ವಿಕ್ರಮಾರ್ಜುನ ಕಾವ್ಯವನ್ನು ಬರೆದಿರುವುದು. ಮಹಾಭಾರತದ ವ್ಯಾಪ್ತಿ ಬಹಳ ದೊಡ್ಡದು ಅವುಗಳನ್ನು ತಿಳಿಸುವ ಪ್ರಯತ್ನವನ್ನು ಪಂಪನು ಮಾಡಿದ್ದನು ಎಂದು ಅವರು ತಿಳಿಸಿದರು.
ಸಾಹಿತಿ ಎಚ್.ಎಸ್.ಶಿವಪ್ರಕಾಶ್ ಮಾತಾನಾಡಿ, ಪ್ರಾಚೀನ ಕಾವ್ಯಗಳಿಗೆ ಹೆಗ್ಗಳಿಕೆ ಕೊಟ್ಟವನು ಪಂಪ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಧರ್ಮ ಮತ್ತು ಕಾವ್ಯದ ಬಗ್ಗೆ ಪಂಪನು ಬಹಳ ವಿಮರ್ಶತ್ಮಕವಾಗಿ ತಿಳಿಸಿದ್ದಾನೆ. ಪ್ರಾಚೀನ ಕಾವ್ಯಗಳಲ್ಲಿ ಸೃಜನಶೀಲತೆ ಮತ್ತು ಅನುವಾದ ಬಹಳ ತೆಳುವಾಗಿದೆ. ಅದೇ ಅನುವಾದಕ್ಕೆ ಆಧುನಿಕ ಸ್ಪರ್ಶ ನೀಡಲಾಗಿದೆ ಎಂದರು.
ವಿಮರ್ಶಕಿ ಎಂ.ಎಸ್.ಆಶಾದೇವಿ, ಪಂಪನ ಆದಿಪುರಾಣದ ಬಗ್ಗೆ ಬಹಳ ಚರ್ಚೆಗಳು ಆಗಿ ಹೋಗಿವೆ. ಆದಿಪುರಾಣ ‘ಆದಿಮ ಪುರಾಣ’ ಎನ್ನುವುದು ನನ್ನ ಅಭಿಪ್ರಾಯ. ಆದಿಪುರಾಣಕ್ಕೆ ಧರ್ಮದ ಕವಚವಿಲ್ಲದೆ ಅಸ್ತಿತ್ವ ಇದೆ ಎಂಬುದನ್ನು ನಾವು ಮೊದಲು ತಿಳಿದಿಕೊಳ್ಳಬೇಕಾದ ಅವಶ್ಯಕತೆ ಇದೆ’. ‘ಆದಿಪುರಾಣ ಎನ್ನುವುದು ಮನುಷ್ಯರ ಅವಸ್ಥೆಗಳನ್ನು ಕುರಿತ ಪುರಾಣವಾಗಿದೆ. ಪಂಪನು ಭೋಗದಲ್ಲಿ ಮತ್ತು ವೈರಾಗ್ಯದಲ್ಲಿ ಮನುಷ್ಯನ ಅವಸ್ಥೆಗಳ ಚಿತ್ರಣವನ್ನ ವರ್ಣಿಸುವ ಕೆಲಸವನ್ನು ಮಾಡಿದ್ದಾನೆ ಎಂದರು.
ಇದೇ ಸಂದರ್ಭದಲ್ಲಿ ಪ್ರೊ.ಸಿ.ಮಹಾದೇವಪ್ಪ ಅವರಿಗೆ ಗುರುವಂದನೆ ಕಾರ್ಯಕ್ರಮವು ನೆರವೇರಿತು. ಸಂಶೋಧಕ ಗುರುರಾಜ ಕರ್ಜಗಿ, ಪ್ರಾಧ್ಯಾಪಕಿ ವಿನಯಾ ಒಕ್ಕುಂದ, ಲೇಖಕ ಬಸವರಾಜ ಕಲ್ಗುಡಿ ಮತ್ತಿತರರು ಉಪಸ್ಥಿತರಿದ್ದರು.