ನಿಮಗೆ ಭರವಸೆ ಇದ್ದರೆ ನಮಗೆ ಬೆಂಬಲ ಕೊಡಿ: ಅಪಾರ್ಟ್ಮೆಂಟ್ ಮಾಲಕರ ಸಭೆಯಲ್ಲಿ ಡಿಕೆಶಿ
ಬೆಂಗಳೂರು, ಮಾ. 25: ‘ನಿಮ್ಮ ಮತಕ್ಕಿಂತ ನಿಮ್ಮ ಜ್ಞಾನ-ಸಲಹೆ ಬಹಳ ಮುಖ್ಯ. ಕಾಂಗ್ರೆಸ್ ಪಕ್ಷ ನಿಮ್ಮ ಜತೆ ನಿಲ್ಲಲಿದೆ ಎಂಬ ಭರವಸೆ ಇದ್ದರೆ ಮಾತ್ರ ನೀವು ನಮಗೆ ಬೆಂಬಲ ಕೊಡಿ. ನಿಮ್ಮ ಧ್ವನಿ ನಮ್ಮ ಧ್ವನಿಯಾಗಬೇಕೆಂದು ಅಪಾರ್ಟ್ಮೆಂಟ್ ಘಟಕ ಆರಂಭಿಸಿದ್ದೇವೆ. ಈ ಬೆಂಗಳೂರನ್ನು ಜಾಗತಿಕ ನಗರವನ್ನಾಗಿ ಮಾಡುವುದು ನಮ್ಮ ಗುರಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.
ಶನಿವಾರ ನಗರದಲ್ಲಿ ಅಪಾರ್ಟ್ಮೆಂಟ್ ಮಾಲಕರ ಸಭೆಯಲ್ಲಿ ಮಾತನಾಡಿದ ಅವರು, ‘ನಾನು ಹಳ್ಳಿಯಿಂದ ಬಂದಿದ್ದರೂ ಬೆಂಗಳೂರಿನ ನಿವಾಸಿಯಾಗಿದ್ದಾನೆ. ಇಲ್ಲಿನ ಸಮಸ್ಯೆಗಳನ್ನು ಅರಿತಿದ್ದೇನೆ. ಬೆಂಗಳೂರು ನಾಗರೀಕರು ಅದರಲ್ಲೂ ಅಪಾರ್ಟ್ಮೆಂಟ್ ನಿವಾಸಿಗಳು ಸುರಕ್ಷಿತವಾಗಿ ಜೀವಿಸಲು ಬಯಸುತ್ತಾರೆ ಎಂದು ಹೇಳಿದರು.
ಈ ಹಿಂದೆ ನಿವೇಶನಗಳನ್ನು ಹಂಚುವ ಪದ್ಧತಿ ಇತ್ತು. ಆದರೆ ಈಗ ಅಪಾರ್ಟ್ಮೆಂಟ್ಗಳು ಹೆಚ್ಚುತ್ತಿವೆ. ನಾವು ಬೆಂಗಳೂರು ಹಾಗೂ ಅದರ ನಾಗರಿಕರನ್ನು ಕಾಪಾಡಿಕೊಳ್ಳಬೇಕು. ಶೇ.39ರಷ್ಟು ತೆರಿಗೆ ರೂಪದ ಆದಾಯ ಇಲ್ಲಿಂದಲೇ ಉತ್ಪಾದನೆಯಾಗುತ್ತಿದೆ. ಸುಶಿಕ್ಷಿತರು ಶೇ.80ರಷ್ಟು ಮಂದಿ ಅಪಾರ್ಟ್ಮೆಂಟ್ಗಳಲ್ಲಿ ವಾಸ ಮಾಡುತ್ತಿದ್ದಾರೆ. ಇವರಿಗೆ ರಕ್ಷಣೆ ಭರವಸೆ ನೀಡಬೇಕಾಗಿದೆ. ಈ ಹಿಂದೆ ರೇರಾ ವಿಚಾರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ಆದರೆ, ಪಕ್ಷ ಈ ವಿಚಾರವಾಗಿ ಧೃಡ ಸಂಕಲ್ಪ ಮಾಡಿ ರೇರಾ ತಂದು ಹಂತ ಹಂತವಾಗಿ ಸುಧಾರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಭಾರತವನ್ನು ಬೆಂಗಳೂರಿನ ಮೂಲಕ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಈ ಮಾತನ್ನು ಸ್ವತಃ ಅಟಲ್ ಬಿಹಾರಿ ವಾಜಪೇಯಿಯವರೇ ಹೇಳಿದ್ದರು. ಇಲ್ಲಿರುವ ಜನ ಬಹಳ ಬುದ್ಧಿವಂತರಿದ್ದಾರೆ. ಇಲ್ಲಿರುವ ಮಾನವ ಸಂಪನ್ಮೂಲ ಅತ್ಯುತ್ತಮವಾಗಿದೆ. ಸ್ವಾತಂತ್ರ್ಯ ಬಂದ ನಂತರ ನೆಹರೂ ಅವರ ನಾಯಕತ್ವದಲ್ಲಿ ಇಲ್ಲಿ ಅನೇಕ ಸಾರ್ವಜನಿಕ ಉದ್ದಿಮೆ ಸ್ಥಾಪಿಸಿದ್ದರು ಎಂದು ಹೇಳಿದರು.
ಅಪಾರ್ಟ್ಮೆಂಟ್ಗಳು ತೆರಿಗೆ ನೀಡುತ್ತಿವೆ. ಪಾಲಿಕೆ ನಿಮ್ಮಿಂದ ವಸೂಲಿ ಮಾಡುತ್ತಿದೆಯೇ ಹೊರತು ನಿಮಗೆ ಪ್ರತಿಯಾಗಿ ಏನನ್ನೂ ಮಾಡುತ್ತಿಲ್ಲ. ನಾನು ಇನ್ನೊಂದು ದಿನ ನಿಮ್ಮ ಜತೆ ಕೂತು ಚರ್ಚೆ ಮಾಡಲು ಸಿದ್ಧನಿದ್ದೇನೆ. ಬೆಂಗಳೂರು ದೇಶಕ್ಕೆ ಹೃದಯವಿದ್ದಂತೆ ಇದನ್ನು ನಾವು ಬೆಳೆಸಿ ಉಳಿಸಿಕೊಳ್ಳಬೇಕು. ಇಲ್ಲಿರುವ ಮಾನವ ಸಂಪನ್ಮೂಲಗಳನ್ನು ನಾವು ಬಳಸಿಕೊಳ್ಳಬೇಕು’ ಎಂದು ಅವರು ತಿಳಿಸಿದರು.