10ಸಾವಿರ ಮದ್ರಸಾ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣ ನೀಡಲು ಕಾರ್ಯಕ್ರಮ: ಡಾ.ಅಬ್ದುಲ್ ಖದೀರ್
ಬೆಂಗಳೂರು, ಮಾ.25: ‘ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ದೇಶದಾದ್ಯಂತ 10 ಸಾವಿರ ಮದ್ರಸಾ ವಿದ್ಯಾರ್ಥಿಗಳನ್ನು ಆಧುನಿಕ ಶಿಕ್ಷಣದೊಂದಿಗೆ ಜೋಡಿಸುವ ಕಾರ್ಯಕ್ರಮವನ್ನು ರೂಪಿಸಲಾಗಿದೆ’ ಎಂದು ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಹೇಳಿದರು.
ಶನಿವಾರ ನಗರದಲ್ಲಿ ಆಯೋಜಿಸಿದ್ದ ಇಫ್ತಾರ್ ಸೌಹಾರ್ದ ಕೂಟದ ಪ್ರಯುಕ್ತ ಆಧುನಿಕ ಶಿಕ್ಷಣ ಪಡೆಯುತ್ತಿರುವ ಆಯ್ದ ಮದ್ರಸಾ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ದೇಶದ 50 ಮದ್ರಸಾಗಳಲ್ಲಿ 10 ಸಾವಿರ ವಿದ್ಯಾರ್ಥಿಗಳಿಗೆ ಮುಖ್ಯವಾಹಿನಿಯ ಶಿಕ್ಷಣವನ್ನು ಒದಗಿಸಲು ಕಾರ್ಯಕ್ರಮ ರೂಪಿಸಿದ್ದೇವೆ. ಮದ್ರಸಾ ಪ್ಲಸ್ 18 ತಿಂಗಳ ಕಾರ್ಯಕ್ರಮವನ್ನು ವಿಶೇಷವಾಗಿ ಶಾಲೆ ಬಿಟ್ಟವರಿಗೆ ಅಥವಾ ಶಾಲೆಗೆ ಹೋಗದವರಿಗಾಗಿ ರೂಪಿಸಲಾಗಿದೆ. ಇದರಲ್ಲಿ ಈ ಮದ್ರಸಾ ವಿದ್ಯಾರ್ಥಿಗಳಿಗೆ 10ನೆ ತರಗತಿಗೆ ಪ್ರವೇಶಿಸಲು ಮತ್ತು ಉತ್ತೀರ್ಣರಾಗಲು ಅವಕಾಶವನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು.
ಮದ್ರಸಾದ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಯ ಶಿಕ್ಷಣದೊಂದಿಗೆ ಜೋಡಿಸಲು ಮತ್ತು ಮೂಲಭೂತ ಶಿಕ್ಷಣವನ್ನು ಒದಗಿಸಲು ಮತ್ತು ಅವರಿಗೆ ಅಗತ್ಯವಾದ ಶೈಕ್ಷಣಿಕ ಅರ್ಹತೆಗಳನ್ನು ಪಡೆಯಲು ಸಹಾಯ ಮಾಡಲು ಸಂಪರ್ಕ(ಬ್ರಿಡ್ಜ್) ಕೋರ್ಸುಗಳು ಮತ್ತು ವೈಯಕ್ತಿಕ ಬೋಧನಾ ತರಗತಿಗಳನ್ನು ನಡೆಸಲಾಗುತ್ತದೆ ಎಂದು ಅಬ್ದುಲ್ ಖದೀರ್ ತಿಳಿಸಿದರು.
ಗುಣಮಟ್ಟದ ಆಧುನಿಕ ಶಿಕ್ಷಣ ನೀಡುವ ಯೋಜನೆಯಲ್ಲಿ ಮದ್ರಸಾಗಳು ಆಸಕ್ತಿ ವಹಿಸುತ್ತಿವೆ. ಗುಣಮಟ್ಟದ ವಸತಿ ಮತ್ತು ಆಹಾರದ ವ್ಯವಸ್ಥೆಗಳು ಮತ್ತು ಗುಣಮಟ್ಟದ ಶಿಕ್ಷಣವನ್ನು ಮದ್ರಸಾ ಆಡಳಿತ ಮಂಡಳಿಯು ನೀಡಲು ಮುಂದಾಗಿದೆ. 2012ರಿಂದ ನಾವು ಹಿಫ್ಝ್ ಪ್ಲಸ್ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ನಡೆಸುತ್ತಿದ್ದೇವೆ. ಶಾಲೆಗೆ ಹೋಗದ ಅಥವಾ ಶಾಲೆಯಿಂದ ಹೊರಗುಳಿದ ಮಕ್ಕಳು ನಮ್ಮ ಈ ಕೋರ್ಸಿನಿಂದ ಪ್ರಯೋಜನ ಪಡೆದು ದ್ವಿತೀಯ ಪಿಯುಸಿ ತೇರ್ಗಡೆಗೊಂಡು ಸಿಇಟಿ ಅಥವಾ ನೀಟ್ ಗೆ ಅರ್ಹತೆ ಪಡೆದಿದ್ದಾರೆ ಎಂದು ಅವರು ಹೇಳಿದರು.
ಸಾಕಷ್ಟು ವಿದ್ಯಾರ್ಥಿಗಳು ಸರಕಾರಿ ಕೋಟಾದ ವೈದ್ಯಕೀಯ ಸೀಟುಗಳನ್ನು ಪಡೆದಿದ್ದಾರೆ. ಮದ್ರಸಾ ಪ್ಲಸ್ ಕಾರ್ಯಕ್ರಮವು ಮದ್ರಸಾ ವಿದ್ಯಾರ್ಥಿಗಳಿಗೆ ‘ಅಕಾಡಮಿಕ್ ಇಂಟೆನ್ಸಿವ್ ಕೇರ್ ಯುನಿಟ್’(ಎಐಸಿಯು) ಅನ್ನು ಒದಗಿಸುತ್ತದೆ ಮತ್ತು ಅವರನ್ನು ಮುಖ್ಯವಾಹಿನಿಯ ಶಿಕ್ಷಣಕ್ಕೆ ಮರಳಿ ತರುವ ಗುರಿಯನ್ನು ಹೊಂದಿದೆ ಎಂದು ಅವರು ತಿಳಿಸಿದರು.
ಈ ಯೋಜನೆಯು 14-18ರ ವಯೋಮಾನದ ಮದ್ರಸಾ ವಿದ್ಯಾರ್ಥಿಗಳಿಗೆ ಎನ್ಐಒಎಸ್ ಬೋರ್ಡ್ನೊಂದಿಗೆ 10ನೆ ತರಗತಿಗೆ ಪ್ರವೇಶಿಸಲು ಮತ್ತು ಉತ್ತೀರ್ಣರಾಗಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ. ವಿದ್ಯಾರ್ಥಿಗಳ ನೋಂದಣಿಯನ್ನು ಶಾಹೀನ್ ವೆಬ್ಸೈಟ್ https://shaheengroup.org/ ನಲ್ಲಿ ಮಾಡಬಹುದು ಎಂದು ಅವರು ಮಾಹಿತಿ ನೀಡಿದರು.
ಮೌಲಾನ ಆಝಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ, ಈ ಯೋಜನೆಗಾಗಿ 500 ಶಿಕ್ಷಕರನ್ನು ನೇಮಿಸಿಕೊಳ್ಳಲು ನಾವು ಕ್ಯಾಂಪಸ್ ನೇಮಕಾತಿ ಅಭಿಯಾನವನ್ನು ಆಯೋಜಿಸಿದ್ದೇವೆ. ಆಯ್ಕೆಯಾದ ಶಿಕ್ಷಕರಿಗೆ ಮಾಸಿಕ 15 ಸಾವಿರ ರೂ.ಗಳಿಂದ 30 ಸಾವಿರ ರೂ.ವೇತನ ಮತ್ತು ಇತರ ಶೈಕ್ಷಣಿಕ ಆಡಳಿತ ವೆಚ್ಚಗಳನ್ನು ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಗಳು ಭರಿಸಲಿವೆ ಎಂದು ಅಬ್ದುಲ್ ಖದೀರ್ ತಿಳಿಸಿದರು. ಈ ಸಂವಾದದಲ್ಲಿ ಶಿಕ್ಷಣ ತಜ್ಞ ಸೈಯದ್ ತನ್ವೀರ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.