ಮೆಟ್ರೋ ರೈಲ್ವೆ ಮಾರ್ಗ | 49 ಎಕರೆ ದಲಿತರ ಭೂಮಿಗೆ ಪರಿಹಾರ ಸಿಕ್ಕಿಲ್ಲ: ಗ್ರಾಮಸ್ಥರ ಅಳಲು
ಬೆಂಗಳೂರು, ಮಾ. 25: ನಗರದ ಕಾಡುಗೋಡಿ ಪ್ಲಾಂಟೇಶನ್(ದಿನ್ನೂರು) ಗ್ರಾಮದ ದಲಿತ ರೈತರಿಂದ ಬೆಂಗಳೂರು ಮೆಟ್ರೋ ರೈಲ್ವೆ ನಿಗಮ ಸ್ವಾಧೀನ ಪಡಿಸಿಕೊಂಡಿರುವ 49 ಎಕರೆ ಭೂಮಿಗೆ ಇದುವರೆಗೂ ಪರಿಹಾರ ನೀಡಿಲ್ಲ, ಕೂಡಲೇ ಸರಕಾರ ನೀಡಬೇಕು ಎಂದು ದಿನ್ನೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಶನಿವಾರ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮದ ಮುಖಂಡ ವಿ.ಮುನೇಂದ್ರ, 150 ಎಕರೆ ಭೂಮಿಯಲ್ಲಿ ದಲಿತ ರೈತರು ಇಂದಿಗೂ ವ್ಯವಸಾಯ, ಕುರಿ, ಮೇಕೆ, ದನ ಸಾಕಾಣಿಕೆಯಿಂದ ಜೀವನ ನಡೆಸುತ್ತಿದ್ದಾರೆ. ಈ ನಡುವೆ ನಮ್ಮ ಮೆಟ್ರೋ ನಿಗಮದವರು ಸುಮಾರು 49 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸಂದರ್ಭದಲ್ಲಿ ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಇದೀಗ 2 ವರ್ಷ ಕಳೆದರೂ ಯಾವುದೇ ಪರಿಹಾರ ದೊರಕಿಲ್ಲ. ಇದರಿಂದಾಗಿ 24 ದಲಿತ ಕುಟುಂಬಗಳು ನಿರ್ಗತಿಕರಾಗಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು.
ಕರ್ನಾಟಕ ಪ್ರಾಂತ ರೈತ ಸಂಘ, ಕಾಡುಗೋಡಿ ಪ್ಲಾಂಟೇಶನ್ ದಲಿತ ರೈತರ ಹೋರಾಟ ಸಮಿತಿ ಹಾಗೂ ಡಾ.ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸೇವಾ ಸಮಿತಿ ಕಾಡುಗೋಡಿ ಪ್ಲಾಂಟೇಶನ್ ಸಂಯೋಗದಿಂದ ಒಂದು ವರ್ಷದಿಂದ ಪರಿಹಾರಕ್ಕಾಗಿ ನಿರಂತರ ಪ್ರತಿಭಟನೆ ಮಾಡುತ್ತಿದ್ದರೂ, ಯಾವುದೇ ಮಂತ್ರಿಗಳು ಅಥವಾ ಅಧಿಕಾರಿಗಳು ನಮಗೆ ಸ್ಪಂದನೆ ನೀಡಿಲ್ಲ. ಆದ್ದರಿಂದ ಹಲವು ಬಾರಿ ಮುಖ್ಯಮಂತ್ರಿ, ಕಂದಾಯ ಸಚಿವರು, ನಗರಾಭಿವೃದ್ಧಿ ಇಲಾಖೆಗೆ ಸೇರಿದಂತೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಮನವಿ ಪತ್ರ ಸಲ್ಲಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.