ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ: ಜಾಮೀನು ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ ಆರೋಪಿ ಮೋಹನ್ ನಾಯಕ್
ಬೆಂಗಳೂರು, ಮೇ 25: ಪತ್ರಕರ್ತೆ, ಸಾಹಿತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಮೋಹನ್ ನಾಯಕ್ ಜಾಮೀನು ಅರ್ಜಿ ವಿಚಾರಣೆಯನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯವು ಜೂ.3ಕ್ಕೆ ಮುಂದೂಡಿದೆ.
ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ 11ನೆ ಆರೋಪಿಯಾಗಿರುವ ಮೋಹನ್ ನಾಯಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಬೆಂಗಳೂರಿನ ಪ್ರಧಾನ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಪೀಠದಲ್ಲಿ ಬುಧವಾರ ನಡೆಯಿತು.
ಬೆಂಗಳೂರಿನಲ್ಲಿ ಬಾಡಿಗೆ ಮನೆ ಮಾಡಿ ಮೋಹನ್ ನಾಯಕ್, ಗೌರಿ ಹತ್ಯೆಯ ಆರೋಪಿಗಳಿಗೆ ಆಶ್ರಯ ನೀಡಿದ್ದ ಎಂದು ಆರೋಪಿಸಲಾಗಿದೆ. ಮೋಹನ್ಗೆ ಗೋವಾ ರಾಜ್ಯದ ಸಂಘಟನೆಯೊಂದರ ಮೂಲಕ ಮೊದಲ ಆರೋಪಿ ಅಮೋಲ್ ಕಾಳೆಯ ಪರಿಚಯವಾಗಿತ್ತು.
ಕಾಳೆಯು ಬೆಂಗಳೂರಿನಲ್ಲಿದ್ದ ಮೋಹನ್ ನಾಯಕ್ ಮಾಡಿದ್ದ ಮನೆಗೆ ಬರುತ್ತಿದ್ದನು. ಜತೆಗೆ ಎರಡನೆ ಆರೋಪಿ ಪರಶುರಾಮ್ ವಾಗೋರೆಯನ್ನೂ ಜತೆಗೆ ಕರೆದೊಯ್ಯುತ್ತಿದ್ದರು ಎನ್ನಲಾಗಿದೆ. ಈ ಮನೆಯಲ್ಲಿಯೇ ಗೌರಿ ಹತ್ಯೆಗೆ ಆರಂಭಿಕ ತಯಾರಿಗಳನ್ನು ಮಾಡಿದ್ದರು ಎನ್ನಲಾಗಿದೆ. ಆನಂತರ ಮೋಹನ್ ನಾಯಕ್ ಮನೆ ಖಾಲಿ ಮಾಡಿ, ಮಂಗಳೂರಿಗೆ ತೆರಳಿದ್ದನು ಎಂದು ಆರೋಪಿಸಲಾಗಿದೆ.