ಬೆಂಗಳೂರಿನಲ್ಲೊಬ್ಬ ಅಪರೂಪದ ’ಯುವರಾಜ’
ಹಸಿದ ಹೊಟ್ಟೆಗಳಿಗೆ ಅನ್ನದಾನ ಮಾಡುವ ಕಾಯಕ
ಬೆಂಗಳೂರು, ಅ.16: ಇಲ್ಲಿನ ಚಾಮರಾಜಪೇಟೆಯಲ್ಲಿ ವಾಸಿಸುವ 20 ಮಂದಿ ವಲಸೆ ಕಾರ್ಮಿಕರಂತೆ ಹಲವು ಮಂದಿಗೆ ಈತ ಕಾಮಧೇನು. ಹಸಿದ ಹೊಟ್ಟೆಗಳಿಗೆ ಪುಷ್ಕಳ ಭೋಜನ ನೀಡುತ್ತಾ ಬಂದಿರುವ ಖಾಸಗಿ ಕಂಪನಿಯೊಂದರ ಉದ್ಯೋಗಿ ಎಂ.ಯುವರಾಜ್ ಇವರ ಅನ್ನದಾತ. ಇದರಲ್ಲೇನು ವಿಶೇಷ ಎಂದು ಹುಬ್ಬೇರಿಸಬೇಡಿ. ಅಸಂಖ್ಯಾತ ವಲಸೆ ಕಾರ್ಮಿಕರ ಹೊಟ್ಟೆ ತುಂಬಿಸಲು ಈ ಉತ್ಸಾಹಿ ಯುವಕನಿಗೆ ಹೇಗೆ ಸಾಧ್ಯವಾಗಿದೆ? ಮುಂದೆ ಓದಿ.
"ನಾವು ಅದೃಷ್ಟಶಾಲಿಗಳು. ಬಹಳಷ್ಟು ಬಾರಿ ನಾವು ರಾತ್ರಿ ಅಡುಗೆಗೆ ಒಲೆ ಹಚ್ಚುವ ಮುನ್ನ ಯುವರಾಜ ಪ್ರತ್ಯಕ್ಷನಾಗುತ್ತಾನೆ. ಪಲಾವ್, ಅನ್ನ, ಸಾಂಬಾರ್, ಪಾಯಸ ಹೀಗೆ ಹಬ್ಬದ ಅಡುಗೆಯೊಂದಿಗೆ" ಎಂದು ಕೂಲಿ ಕೆಲಸ ಮಾಡುತ್ತಿರುವ ಸರೋಜಾ ಹೇಳುತ್ತಾರೆ.
"ನಮಗೆ ತಿನ್ನಲು ಹಕ್ಕಿದೆ; ಆದರೆ ವ್ಯರ್ಥ ಮಾಡುವ ಹಕ್ಕು ಇಲ್ಲ" ಎಂಬ ತತ್ವಕ್ಕೆ ಕಟ್ಟುಬಿದ್ದು 26ರ ಈ ಯುವಕ ಕಾರ್ಯನಿರ್ವಹಿಸುತ್ತಿದ್ದಾರೆ. "ನಮ್ಮ ನಗರದ ನಿರ್ಮಾರ್ತೃಗಳಾದ ಬಹಳಷ್ಟು ಬಡ ಕೂಲಿ ಕಾರ್ಮಿಕರಿಗೆ ಊಟ ನೀಡುತ್ತಾ ಬಂದಿದ್ದಾರೆ. ಗುರುವಾರ ಚಾಮರಾಜಪೇಟೆಯಲ್ಲಿ ಕೂಲಿಗಳಿಗೆ ಊಟ ನೀಡಲು ಬಂದಾಗ, ಯುವರಾಜ್ ಅವರಿಗೆ ಬನಶಂಕರಿಯ ಸಂಕಲ್ಪ ಬ್ಯಾಂಕ್ವೆಟ್ನಿಂದ ಕರೆ ಬಂತು. 150 ಮಂದಿಗೆ ಬೇಕಾಗುವಷ್ಟು ಆಹಾರ ಅಧಿಕವಾಗಿ ಇದೆ ಎಂಬ ಮಾಹಿತಿ ಸಿಕ್ಕಿತು. ಹೀಗೆ ಇವರ ಜಾಲದಲ್ಲಿರುವ ಹಲವು ಮಂದಿ ಅಧಿಕ ಆಹಾರ ಪದಾರ್ಥಗಳು ಉಳಿದು ವ್ಯರ್ಥವಾಗುತ್ತದೆ ಎಂದಾದಲ್ಲಿ, ಮಾಹಿತಿ ನೀಡುತ್ತಾರೆ. "ಅಗತ್ಯಕ್ಕಿಂತ ಹೆಚ್ಚು ಅಡುಗೆ ಮಾಡಿ ವ್ಯರ್ಥ ಮಾಡಬಾರದು ಎನ್ನುವುದು ನನ್ನ ಸಿದ್ದಾಂತ. ಈ ಹಿನ್ನೆಲೆಯಲ್ಲಿ ವ್ಯರ್ಥವಾಗುವ ಆಹಾರವನ್ನು ಸಂಗ್ರಹಿಸಿ ಅಗತ್ಯ ಇರುವವರಿಗೆ ನೀಡುವ ಜತೆಗೆ ಸಾಕಷ್ಟೇ ಪ್ರಮಾಣದಲ್ಲಿ ಆಹಾರ ಸಿದ್ಧಪಡಿಸುವಂತೆ ಜನಜಾಗೃತಿಯನ್ನೂ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಹೀಗೆ ಮದುವೆ, ಮುಂಜಿ, ನಿಶ್ಚಿತಾರ್ಥ ಸಮಾರಂಭಗಳಲ್ಲಿ ವ್ಯರ್ಥವಾಗುವ ಆಹಾರವನ್ನು ಸಂಗ್ರಹಿಸಿ, ವಿತರಿಸುವುದು ಇವರಿಗೆ ಕಾಯಕವಾಗಿಬಿಟ್ಟಿದೆ.