ಅನೈತಿಕ ಸಂಬಂಧ ಆರೋಪ: ಯುವಕನ ಹತ್ಯೆ
ಬೆಂಗಳೂರು, ಎ.8: ಪತ್ನಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಯುವಕನೊಬ್ಬನನ್ನು ವ್ಯಕ್ತಿಯೊಬ್ಬ ಕೊಲೆಗೈದಿರುವ ದುರ್ಘಟನೆ ಇಲ್ಲಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಚಿಕ್ಕಬನ್ನಹಳ್ಳಿ ಕೆರೆ ಬಳಿಯ ಕೂಲಿ ಕಾರ್ಮಿಕರ ಶೆಡ್ನಲ್ಲಿ ವಾಸಿಸುತ್ತಿದ್ದ ಕಂಬಿ ಕಟ್ಟುವ ಕೆಲಸ ಮಾಡುತ್ತಿದ್ದ ಕಾಶಿ ಮಹಂತ ಭಾರನಾಥ (25) ಎಂಬವನನ್ನು ಪ್ರೇಮ್ಕುಮಾರ್ ಸಮಂತ್ ಎಂಬಾತ ಕೊಲೆಗೈದಿದ್ದಾನೆ.
ಕಲ್ಕತ್ತ ಮೂಲದ ಇವರಿಬ್ಬರು ಚಿಕ್ಕಬನಹಳ್ಳಿಯಲ್ಲಿ ಖಾಸಗಿ ಕಂಪೆನಿಯವರು ನಿರ್ಮಿಸುತ್ತಿದ್ದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದು, ಹತ್ತಿರದ ಕೂಲಿಕಾರ್ಮಿಕರ ಶೆಡ್ನಲ್ಲಿ ವಾಸಿಸುತ್ತಿದ್ದರು. ಪ್ರೇಮ್ಕುಮಾರ್ ತನ್ನ ಪತ್ನಿಯನ್ನು ಕಾಶಿಗೆ ಪರಿಚಯ ಮಾಡಿಸಿದ್ದು, ನಂತರ ಇವರಿಬ್ಬರ ನಡುವೆ ಅನೈತಿಕ ಸಂಬಂಧವಿರುವುದು ಪ್ರೇಮ್ ಕುಮಾರ್ ಗೆ ತಿಳಿದಿತ್ತು.
ಶುಕ್ರವಾರ ಸಂಜೆ ಕೆಲಸದ ನಂತರ ಮನೆಗೆ ಮರಳಿದ್ದ ಪ್ರೇಮ್ ಕುಮಾರ್ ತನ್ನ ಪತ್ನಿಯ ಜೊತೆ ಕಾಶಿ ಇರುವುದನ್ನು ಗಮನಿಸಿದ್ದಾನೆ. ಇದರಿಂದ ಕೋಪಗೊಂಡ ಸಮಂತ್ ರಾತ್ರಿ ವೇಳೆ ಶೆಡ್ನಲ್ಲಿ ಅಡುಗೆ ಮಾಡುತ್ತಿದ್ದ ಕಾಶಿಯ ತಲೆಗೆ ಸುತ್ತಿಗೆಯಿಂದ ಹೊಡೆದಿದ್ದಾನೆ. ಕೆಳಗೆ ಬಿದ್ದ ಆತನ ಕುತ್ತಿಗೆಯನ್ನು ಅಲ್ಲೆ ಇದ್ದ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣ ಸಂಬಂಧ ಕಾಡುಗೋಡಿ ಠಾಣಾ ಪೊಲೀಸರು ಆರೋಪಿ ಪ್ರೇಮ್ಕುಮಾರ್ ನನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.