ಅನಾಥೆಯ ಕೈ ಹಿಡಿದ ಖಾಸಗಿ ಸಂಸ್ಥೆಯ ಉದ್ಯೋಗಿ
ಬೆಂಗಳೂರು, ಮೇ 8: ಓದುವ ವಯಸ್ಸಿನಲ್ಲಿ ಬಾಲಕಾರ್ಮಿಕ ಪದ್ಧತಿಯ ಶೋಷಣೆಗೆ ಗುರಿಯಾಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ವೀಕಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಅನಾಥೆಯೋರ್ವಳನ್ನು ನಗರದ ಕೆ.ಸಿ. ರೂಪೇಶ್ ಕುಮಾರ್ ಎಂಬವರು ವರಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸೋಮವಾರ ಬೆಂಗಳೂರಿನ ಹೊಸೂರು ರಸ್ತೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ವೀಕಾರ ಕೇಂದ್ರದ ಆವರಣದಲ್ಲಿರುವ ಗಣಪತಿ ದೇವಾಲಯದಲ್ಲಿ ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗ ಮತ್ತು ವರನ ಬಂಧುಬಳಗದ ಸಮ್ಮುಖದಲ್ಲಿ ನವ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇಲಾಖೆಯ ಉಪನಿರ್ದೇಶಕಿ ರತ್ನಾ ಬಿ. ಕಲಮದಾನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಗೀತಾ ಪಾಟೀಲ್ ಮತ್ತು ಸ್ವೀಕಾರ ಕೇಂದ್ರದ ಅಧೀಕ್ಷಕಿ ಪುಟ್ಟರತ್ನ ಸೇರಿದಂತೆ ವರನ ತಂದೆ, ತಾಯಿಬಂಧು ಬಳಗ, ಸ್ವೀಕಾರ ಕೇಂದ್ರದ ಸಿಬ್ಬಂದಿ ಸೇರಿದಂತೆ ಸುಮಾರು ನೂರು ಮಂದಿ ಈ ಅಪರೂಪದ ಮದುವೆಗೆ ಸಾಕ್ಷಿಯಾದರು.
ಹಿನ್ನೆಲೆ: ಖಾಸಗಿ ಸಂಸ್ಥೆಯೊಂದರ ಉದ್ಯೋಗದಲ್ಲಿರುವ ರೂಪೇಶ್ ಕುಮಾರ್ ಗೆ ಓರ್ವ ಅನಾಥೆಯನ್ನು ವಿವಾಹವಾಗುವ ಆಸೆಯಿತ್ತು. ತಮ್ಮ ಮನದ ಇಂಗಿತವನ್ನು ಪೋಷಕರಲ್ಲಿ ಹೇಳಿದ್ದರು. ಪೋಷಕರು ಕಿಂಚಿತ್ತೂ ವಿರೋಧ ವ್ಯಕ್ತಪಡಿಸದೆ ತಮ್ಮ ಮಗನ ಮನೋಭಿಲಾಷೆಗೆ ಸಮ್ಮತಿ ಸೂಚಿಸಿದ್ದರು. ಕುಟುಂಬದ ಸಮ್ಮತಿ ಸಿಕ್ಕ ತಕ್ಷಣವೇ ವಧುವಿನ ಅನ್ವೇಷಣೆಗೆ ರೂಪೇಶ್ ಕೈಹಾಕಿದರು. ತನಗೆ ಗೊತ್ತಿದ್ದವರು, ಬಂಧು-ಬಳಗ, ಮಿತ್ರರ ಬಳಿ ಅನಾಥೆ ವಧುವಿಗಾಗಿ ಮೊರೆ ಹೋದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ವೀಕಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಚೈತ್ರಳ ಬಗ್ಗೆ ಸಂಬಂಧಿಕರಿಂದ ಮಾಹಿತಿ ಲಭಿಸಿತ್ತು.