ಮೋಹನ್ ಕೊಂಡಜ್ಜಿ, ಪಿ.ಆರ್.ರಮೇಶ್ ನಾಮನಿರ್ದೇಶನಕ್ಕೆ ರಾಜ್ಯಪಾಲರ ಒಪ್ಪಿಗೆ
ಬೆಂಗಳೂರು, ಮೇ 17: ವಿಧಾನ ಪರಿಷತ್ತಿಗೆ ಮೋಹನ್ ಕೊಂಡಜ್ಜಿ ಮತ್ತು ಪಿ.ಆರ್.ರಮೇಶ್ ಅವರನ್ನು ನಾಮನಿರ್ದೇಶನ ಮಾಡಲು ರಾಜ್ಯಪಾಲ ವಜೂಭಾಯಿ ವಾಲಾ ಅವರು ಒಪ್ಪಿಗೆ ಸೂಚಿಸಿದ್ದಾರೆ.ಸಿ.ಎಂ.ಲಿಂಗಪ್ಪ ಅವರ ಹೆಸರನ್ನು ತಿರಸ್ಕರಿಸಿದ್ದಾರೆ.
ಲಿಂಗಪ್ಪ ಅವರನ್ನು ಶಿಕ್ಷಣ ಹಾಗೂ ಸಮಾಜ ಸೇವೆ ಕೋಟಾದಲ್ಲಿ ನಾಮನಿರ್ದೇಶನಕ್ಕೆ ಕೋರಿ ಸರಕಾರ ಶಿಫಾರಸ್ಸು ಮಾಡಿತ್ತು. ಆದರೆ, ಆ ಕೋಟಾದಡಿಯಲ್ಲಿ ಬರುವುದಿಲ್ಲ ಎಂದು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.
ವಿಧಾನ ಪರಿಷತ್ತಿನ ಖಾಲಿ ಇರುವ ಮೂರು ಸ್ಥಾನಗಳಿಗೆ ನಾಮ ನಿರ್ದೇಶನಕ್ಕೆ ಸಿ.ಎಂ.ಲಿಂಗಪ್ಪ, ಮೋಹನ್ ಕೊಂಡಜ್ಜಿ, ಪಿ.ಆರ್.ರಮೇಶ್ ಸೇರಿದಂತೆ ಮೂರು ಮಂದಿಯ ಹೆಸರನ್ನು ಸರಕಾರ ಇತ್ತೀಚೆಗಷ್ಟೇ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿತ್ತು. ಇದೀಗ ಲಿಂಗಪ್ಪ ಹೆಸರಿನ್ನು ತಿರಸ್ಕರಿಸಿರುವುದು ಸರಕಾರಕ್ಕೆ ಮುಖಭಂಗವನ್ನುಂಟು ಮಾಡಿದೆ.
‘ವಿಧಾನ ಪರಿಷತ್ತಿಗೆ ಸಿ.ಎಂ.ಲಿಂಗಪ್ಪರನ್ನು ನಾಮನಿರ್ದೇಶನ ಮಾಡಲು ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ನನಗೆ ಇನ್ನೂ ಸರಿಯಾಗಿ ಮಾಹಿತಿಯಿಲ್ಲ. ಈ ಬಗ್ಗೆ ಪರಿಶೀಲನೆ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ’ - ಸಿದ್ದರಾಮಯ್ಯ ಮುಖ್ಯಮಂತ್ರಿ