ಪಟ್ಟಿ ಬಿಡುಗಡೆಗೆ ‘ಆಪರೇಷನ್’ ಅಡ್ಡಿ: ಎಚ್.ಡಿ.ದೇವೇಗೌಡ
ಬೆಂಗಳೂರು, ಜು.6: ಮುಂದಿನ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಸಿದ್ಧಗೊಂಡಿದೆ. ಆದರೆ, ಬಿಡುಗಡೆಗೊಳಿಸಿದರೆ ಮತ್ತೆ ಆಪರೇಷನ್ ಕಮಲ ಮಾಡಬಹುದೇನೋ ಎನ್ನುವ ಅನುಮಾನ ಇದೆ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಇಂದಿಲ್ಲಿ ಹೇಳಿದ್ದಾರೆ.
ಗುರುವಾರ ನಗರದ ಖಾಸಗಿ ಹೊಟೇಲ್ನಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಮತ್ತು ಕೋರ್ ಕಮಿಟಿ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ನಮ್ಮ ಏಳೆಂಟು ಅಭ್ಯರ್ಥಿಗಳನ್ನು ಆಪರೇಷನ್ ಕಮಲ ಮಾಡಿದರು. ಹೀಗಾಗಿಯೇ, ಆಪರೇಷನ್ ಕಮಲದಿಂದ ನಮಗೆ ಅನುಭವ ಆಗಿದೆ. ಅದ್ದರಿಂದ, ಅಭ್ಯರ್ಥಿಗಳ ಪಟ್ಟಿ ನಿಧಾನವಾಗಿ ಬಿಡುಗಡೆಗೊಳಿಸಲು ತೀರ್ಮಾನಿಸಲಾಗಿದೆ. ಅಲ್ಲದೆ, ಒಂದೆರೆಡು ಜಿಲ್ಲೆಗಳಲ್ಲಿ ಬಿಟ್ಟರೆ, ಉಳಿದ ಎಲ್ಲ ಕಡೆ ಜೆಡಿಎಸ್ ಅಭ್ಯರ್ಥಿಗಳು ಸಮರ್ಥವಾಗಿದ್ದಾರೆ ಎಂದರು.
ಇದಕ್ಕೂ ಮೊದಲು ಮಾತನಾಡಿದ ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಇತ್ತೀಚಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಲ್ಲಿಯೇ ಅಭ್ಯರ್ಥಿಗಳ ಕೊರತೆ ಶುರುವಾಗಿದೆ. ಈಗ ನಾವು ಪಟ್ಟಿ ಬಿಡುಗಡೆ ಮಾಡಿದರೆ ನಮ್ಮ ಅಭ್ಯರ್ಥಿಗಳನ್ನೆ ಟ್ಯಾಪ್ ಮಾಡಬಹುದು. ಅಲ್ಲದೆ, ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಸಿದ್ಧಗೊಂಡಿದ್ದು, ರಾಷ್ಟ್ರೀಯ ಅಧ್ಯಕ್ಷರ ಕೈ ಸೇರಿದೆ. ಯಾವಾಗ ಬಿಡುಗಡೆ ಮಾಡಬೇಕೆನ್ನುವುದು ಅವರಿಗೆ ಗೊತ್ತು ಎಂದು ಹೇಳಿದರು.