ಪೇದೆಯನ್ನು ತಳ್ಳಿ ರೌಡಿ ಪರಾರಿ
ಬೆಂಗಳೂರು, ಅ.4: ಕಾರಿನಲ್ಲಿ ಹೋಗುತ್ತಿದ್ದ ರೌಡಿಯನ್ನು ಸಿಸಿಬಿ ಪೊಲೀಸರು ಹಿಡಿಯಲು ಮುಂದಾದಾಗ ಪೇದೆಯೊಬ್ಬರನ್ನು ತಳ್ಳಿ ಪರಾರಿಯಾಗಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪೇದೆ ಅರುಣ್ಕುಮಾರ್ ಎಂಬುವರನ್ನು ತಳ್ಳಿ ಹಾಕಿದ್ದು, ಘಟನೆಯಲ್ಲಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆ ವಿವರ: ನಗರದ ಚಂದ್ರಶೇಖರ್ ಲೇಔಟ್ನ ಡಿ ಗ್ರೂಪ್ ಬಡಾವಣೆಯಲ್ಲಿ ರೌಡಿ ಗುರುಮೂರ್ತಿ ತನ್ನ ಸಹಚರ ವಿವೇಕ್ನೊಂದಿಗೆ ಕಾರಿನಲ್ಲಿ ಹೋಗುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ತಕ್ಷಣ ಸಿಸಿಬಿ ಪೊಲೀಸರ ತಂಡವೊಂದು ಕಾರ್ಯಾಚರಣೆಗೆ ತೆರಳಿದ್ದು, ಮಂಗಳವಾರ ತಡರಾತ್ರಿ 11:30ರಲ್ಲಿ ರೌಡಿ ಗುರುಮೂರ್ತಿ ಇದ್ದ ಕಾರು ಬರುತ್ತಿದ್ದಂತೆ ಕಾರನ್ನು ತಡೆಯಲು ಈ ತಂಡ ಮುಂದಾಗಿದೆ.
ಈ ವೇಳೆ ಸಿಸಿಬಿಯ ಪೇದೆ ಅರುಣ್ಕುಮಾರ್ ಕಾರಿನ ಕೀಯನ್ನು ತೆಗೆದುಕೊಳ್ಳಲು ಮುಂದಾಗುತ್ತಿದ್ದಂತೆ ರೌಡಿ ಇವರನ್ನು ಕೆಳಗೆ ತಳ್ಳಿ ಕಾರು ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ. ಕೆಳಗೆ ಬಿದ್ದ ಅರುಣ್ಕುಮಾರ್ ಅವರ ತಲೆಗೆ ಪೆಟ್ಟಾಗಿದ್ದು, ತಕ್ಷಣ ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.