ಧರ್ಮೇಂದ್ರ - ಹೇಮಾ ಮಾಲಿನಿ ಮಾತುಕತೆ ಮುಗಿಯುವವರೆಗೆ ಕುಟುಂಬದವರ ಜೊತೆ ಕಾದು ಕೂತ ಮದುಮಗ ಜಿತೇಂದ್ರ !
ಸಿನಿಮೀಯ ಶೈಲಿಯ ಘಟನೆಯ ಕುರಿತು ಆತ್ಮಕಥೆಯಲ್ಲಿ ಉಲ್ಲೇಖ
ಮುಂಬೈ: ಬಾಲಿವುಡ್ನ ಡ್ರೀಮ್ ಗರ್ಲ್ ಹೇಮಾಮಾಲಿನಿ ತಾವು ತುಂಬಾ ಪ್ರೀತಿಸುತ್ತಿದ್ದ ಧರ್ಮೇಂದ್ರ ಅವರನ್ನು ವಿವಾಹವಾಗುವ ಮುನ್ನ ತಮ್ಮ ಜೀವನದಲ್ಲಿ ನಡೆದ ಕೆಲ ನಾಟಕೀಯ ಸನ್ನಿವೇಶಗಳನ್ನು ತಮ್ಮ ಆತ್ಮಕಥನ ʼಬಿಯಾಂಡ್ ದಿ ಡ್ರೀಮ್ ಗರ್ಲ್ʼನಲ್ಲಿ ಬರೆದಿದ್ದಾರೆ.
ಹೇಮಾಮಾಲಿನಿ ತಮ್ಮ ಕುಟುಂಬದ ಇಚ್ಛೆಯಂತೆ ಜೀತೇಂದ್ರ ಅವರನ್ನು ಇನ್ನೇನು ವಿವಾಹವಾಗಬೇಕೆನ್ನುವಷ್ಟರಲ್ಲಿ ಅವರ ಮನೆಬಾಗಿಲಿಗೆ ತುಸು ಮದ್ಯದ ನಶೆಯಲ್ಲಿದ್ದ ಧರ್ಮೇಂದ್ರ ಆಗಮಿಸಿ ನಂತರ ನಡೆದ ಚಕಮಕಿಯ ಕುರಿತು ಹೇಮಾ ತಮ್ಮ ಆತ್ಮಕಥನದಲ್ಲಿ ಉಲ್ಲೇಖಿಸಿದ್ದಾರೆ.
ಅದಾಗಲೇ ವಿವಾಹವಾಗಿ ಮಕ್ಕಳನ್ನು ಹೊಂದಿದ್ದ ಧರ್ಮೇಂದ್ರ ಅವರನ್ನು ಹೇಮಾಮಾಲಿನಿ ವಿವಾಹವಾಗುವುದು ಆಕೆಯ ತಾಯಿಗೆ ಇಷ್ಟವಿರಲಿಲ್ಲ. ಆದರೆ ಧರ್ಮೇಂದ್ರ ಅವರನ್ನು ತುಂಬಾ ಪ್ರೀತಿಸುತ್ತಿದ್ದ ಹೇಮಾಮಾಲಿನಿ ಹೆಚ್ಚಾಗಿ ಸೆಟ್ನಲ್ಲಿ ಮಾತ್ರ ಅವರನ್ನು ಭೇಟಿಯಾಗುತ್ತಿದ್ದರು. ಈ ನಡುವೆ ಜೀತೇಂದ್ರ ಕೂಡ ಹೇಮಾಮಾಲಿನಿಯನ್ನು ಪ್ರೀತಿಸುತ್ತಿದ್ದರೂ ಆಕೆ ಅದಾಗಲೇ ಧರ್ಮೇಂದ್ರ ಅವರಿಗೆ ಮನಸೋತಿದ್ದಾರೆಂದು ತಿಳಿದು ಹೇಮಾರನ್ನು ತಮ್ಮ ಮನದಿಂದ ದೂರ ಸರಿಸಿ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ಆದರೆ ಹೇಮಾ ಅವರ ತಾಯಿ ಹಾಗೂ ಕುಟುಂಬ ಅವರನ್ನು ಒತ್ತಾಯಪಡಿಸಿ ಜೀತೇಂದ್ರರನ್ನೇ ಮದುವೆಯಾಗುವಂತೆ ಸೂಚಿಸಿದ್ದರಿಂದ ಅನಿವಾರ್ಯವಾಗಿ ಒಪ್ಪಿದ್ದರು ಹೇಮಾ. ಹೀಗೆ ಅವಸವಸರವಾಗಿ ಮದುವೆಯ ಏರ್ಪಾಟೂ ನಡೆದು ಎರಡೂ ಕುಟುಂಬಗಳು ಮದುವೆ ನೆರವೇರಿಸಲು ಮದ್ರಾಸ್ಗೆ ತೆರಳಿದ್ದವು. ಆದರೆ ಸ್ಥಳೀಯ ಮಾಧ್ಯಮಕ್ಕೆ ಈ ಗುಟ್ಟು ತಿಳಿದು ವರದಿ ಮಾಡಿದಾಗ ಮುಂಬೈಯಲ್ಲಿದ್ದ ಧಮೇಂದ್ರಗೆ ದೊಡ್ಡ ಆಘಾತವಾಗಿತ್ತು. ಅವರು ತಡ ಮಾಡದೆ ಜೀತೇಂದ್ರ ಅವರ ಆಗಿನ ಸ್ನೇಹಿತೆ, ನಂತರ ಅವರನ್ನು ಮದುವೆಯಾಗಿದ್ದ ಶೋಭಾ ಸಿಪ್ಪಿಯ ಜತೆಗೆ ನೇರವಾಗಿ ಚೆನ್ನೈಗೆ ಬಂದು ಬಿಟ್ಟರು.
ಚೆನ್ನೈಯಿಂದ ಸೀದಾ ಮದುವೆ ನಡೆಯುತ್ತಿದ್ದ ಸ್ಥಳಕ್ಕೆ ಧರ್ಮೇಂದ್ರ ಆಗಮಿಸಿದ ವೇಳೆ ಮದುವೆ ಮನೆಯಲ್ಲಿ ದೊಡ್ಡ ರಾದ್ಧಾಂತವೇ ನಡೆದು ಹೋಗಿತ್ತಲ್ಲದೆ ಹೇಮಾ ಅವರ ತಂದೆ ಧರ್ಮೇಂದ್ರರನ್ನು ಮನೆಯಿಂದ ಹೊರಗಟ್ಟಿದ್ದರಲ್ಲದೆ ಈಗಾಗಲೇ ವಿವಾಹವಾಗಿರುವ ನೀನು ನನ್ನ ಮಗಳನ್ನು ವಿವಾಹವಾಗಕೂಡದು ಎಂದಿದ್ದರು.
ಆದರೆ ಧರ್ಮೇಂದ್ರ ಯಾವುದಕ್ಕೂ ಜಗ್ಗಲಿಲ್ಲ. ಕೊನೆಗೆ ಧರ್ಮೇಂದ್ರ ಮತ್ತು ಹೇಮಾ ಜತೆಯಾಗಿ ಒಂದು ಕೊಠಡಿಯಲ್ಲಿ ಮಾತನಾಡಿ ನಂತರ ಹೊರ ಬಂದ ಹೇಮಾ ತಾವು ಜೀತೇಂದ್ರ ಅವರನ್ನು ವಿವಾಹವಾಗುವುದಿಲ್ಲ ಎಂದಾಕ್ಷಣ ಜೀತೇಂದ್ರ ಕುಟುಂಬ ಅವಮಾನದಿಂದ ಅಲ್ಲಿಂದ ಹೊರನಡೆದಿತ್ತು. ನಂತರ ಹೇಮಾ ಧಮೇಂದ್ರ ಅವರನ್ನು ವಿವಾಹವಾಗಿದ್ದರು ಎಂದು ಆತ್ಮಕಥೆಯಲ್ಲಿ ಉಲ್ಲೇಖಿಸಲಾಗಿದೆ.