ಕಾಶ್ಮೀರ್ ಫೈಲ್ಸ್ ನಂತಹ ʼದ್ವೇಷಯುತ ಕೊಳೆʼಯನ್ನು ಆಸ್ಕರ್ಗೆ ಕಳಿಸಿದರೆ ಭಾರತಕ್ಕೆ ಅವಮಾನ: ಕೆನಡಾದ ಚಿತ್ರ ನಿರ್ಮಾಪಕ
Photo: dylanmohangray/twitter
ಮುಂಬೈ: ಕೆನಡಿಯನ್ ಚಲನಚಿತ್ರ ನಿರ್ಮಾಪಕ ಡೈಲನ್ ಮೋಹನ್ ಗ್ರೇ ಅವರು ಕಾಶ್ಮೀರ ಫೈಲ್ಸ್ "ಕಲಾತ್ಮಕ ಅರ್ಹತೆಯಿಲ್ಲದ ದ್ವೇಷಪೂರಿತ ಕೊಳೆ" ಹಾಗೂ ಅನುರಾಗ್ ಕಶ್ಯಪ್ ಅವರು ಭಾರತದ ಒಳ್ಳೆಯ ಹೆಸರನ್ನು ಉಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಡೈಲನ್ 2020 ರಲ್ಲಿ ಬಿಡುಗಡೆಯಾದ ನೆಟ್ಫ್ಲಿಕ್ಸ್ ಡಾಕ್ಯುಮೆಂಟರಿ ಸರಣಿ ಬ್ಯಾಡ್ ಬಾಯ್ ಬಿಲಿಯನೇರ್ಸ್ ಇಂಡಿಯಾವನ್ನು ಮಾಡಿದ್ದಾರೆ.
ಆಸ್ಕರ್ನಲ್ಲಿ ಚಿತ್ರದ ನಿರೀಕ್ಷೆಗಳ ಕುರಿತು ಚಿತ್ರನಿರ್ದೇಶಕ ಅನುರಾಗ್ ಕಶ್ಯಪ್ ಅವರ ಟೀಕೆಗಳ ಕುರಿತು ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿದ ಡೈಲನ್, "ಹೌದು, ನಿಜವಾಗಿಯೂ ಇದು ಯಾವುದೇ ಕಲಾತ್ಮಕ ಅರ್ಹತೆಯನ್ನು ಹೊಂದಿಲ್ಲದ ಧ್ವೇಷಪೂರಿತ ಕೊಳೆ. 'ತಟಸ್ಥ' ಮಂಡಳಿಯಿಂದ ಈ ಚಿತ್ರ ಆಯ್ಕೆಯಾಗಿದ್ದರೆ ಇದು ಭಾರತಕ್ಕೆ ಮತ್ತೊಂದು ಮುಜುಗರವಾಗಿರುತ್ತಿತ್ತು... ಅನುರಾಗ್ ಕಶ್ಯಪ್ ದೇಶದ ಬಗ್ಗೆ ಉಳಿದಿರುವ ಒಳ್ಳೆಯ ಹೆಸರನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ." ಎಂದು ಟ್ವೀಟ್ ಮಾಡಿದ್ದಾರೆ.
ಡೈಲನ್ ತಮ್ಮ ಎರಡನೇ ಟ್ವೀಟ್ನಲ್ಲಿ, "ಆರ್ಆರ್ಆರ್ ಕೂಡ ಹೇಯ ಮತ್ತು ದುಃಖಕರವಾಗಿದೆ, ಹೇಳಿಕೊಳ್ಳುವಂತಹ ಸೆಟ್ ಆಪ್ ಅಲ್ಲ." ಎಂದು ಟ್ವೀಟ್ ಮಾಡಿದ್ದಾರೆ.
ಕಾಶ್ಮೀರಿ ಪಂಡಿತರ ಹತ್ಯೆಗಳ ಕುರಿತಾಗಿನ ಚಿತ್ರವೆಂದು ಹೇಳಿಕೊಂಡ ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಹಿಂದುತ್ವವಾದಿ ಬಲಪಂಥೀಯರು ವ್ಯಾಪಕ ಪ್ರಚಾರ ಕೊಟ್ಟು ಗೆಲ್ಲಿಸಿದ್ದರು. ವಿವಿಧ ರಾಜ್ಯಗಳ ಬಿಜೆಪಿ ಸರ್ಕಾರಗಳು ತೆರಿಗೆ ವಿನಾಯಿತಿ ನೀಡಿ ಚಿತ್ರ ವೀಕ್ಷಣೆಗೆ ಪ್ರೋತ್ಸಾಹ ಮಾಡಿತ್ತು. ಅಮಿತ್ ಶಾ ಮೊದಲಾದವರೇ ಚಿತ್ರವನ್ನು ಕೊಂಡಾಡಿದ್ದರು.